ಇತಿಹಾಸವೇ ಇಲ್ಲದ ದೇಶ ಇತಿಹಾಸ ಸೃಷ್ಟಿಸಲು ಏನೆಲ್ಲಾ ಮಾಡಬಹುದು
ಮೋಸಿನ್ ಹಮೀದರ "ದ ರಿಲಕ್ಟೆಂಟ್ ಫಂಡಮೆಂಟಲಿಸ್ಟ್" ಕಾದಂಬರಿ
ಡಾ. ಹರೀಶ ಎಂ ಜಿ (ಹರೀಶ ಗಂಗಾಧರ) ಅವರ ಮೊದಲ ಪುಸ್ತಕ ಗುರುತಿನ ಬಾಣಗಳು 3.2.2024 ರಂದು ‘ಸಂಕಥನ’ದಿಂದ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ಈ ಪುಸ್ತಕದಲ್ಲಿರುವ “ಮೂಲಭೂತವಾದದ ಮೂಲ ಹುಡುಕುತ್ತಾ” ಎಂಬ ಬರಹ ನಿಮ್ಮ ಓದಿಗೆ.
ನಾನಾಗ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದೆ. ಸಣ್ಣ ಊರಿನಿಂದ ಬೆಂಗಳೂರಿಗೆ ಬಂದಿದ್ದ ನನಗೆ ಇಂಗ್ಲಿಷ್ ಕಲಿಯುವ ಹುಚ್ಚು. ಬೆಳಗಿನ ಜಾವ ಎದ್ದ ಕೂಡಲೇ BBC, CNN, Fox News ನೋಡುವ ಅಭ್ಯಾಸ. ಅಂದು ಬೆಳಗಿನ ಜಾವ ಟಿವಿ ಆನ್ ಮಾಡಿದ ನನಗೆ ಶಾಕ್ ಕಾದಿತ್ತು. ವಿಮಾನವೊಂದು ನೂರಾಹತ್ತನೇ ಮಹಡಿಯ ಕಟ್ಟಡಕ್ಕೆ ಡಿಕ್ಕಿ ಹೊಡೆದದ್ದು ನನಗೆ ನಂಬಲಾಗಲಿಲ್ಲ. ವಿಷಯ ಖಾತ್ರಿಪಡಿಸಿಕೊಳ್ಳಲು ಚಾನೆಲ್ ಬದಲಾಯಿಸಿದೆ, ಎಲ್ಲೆಲ್ಲೂ ಅದೇ ಸುದ್ದಿ. ಆರಂಭಿಕ ಹಂತದಲ್ಲಿ ಇದೊಂದು ಅಪಘಾತ ಅಂತ ಸುದ್ದಿವಾಹಿನಿಗಳು ಹೇಳಿದವು, ಆದರೆ ಇನ್ನೊಂದು ಬೃಹತ್ ವಿಮಾನ ಪಕ್ಕದ ಅವಳಿ ಕಟ್ಟಡಕ್ಕೆ ಗುದ್ದಿದಾಗಲೇ ಇದೊಂದು ಭಯೋತ್ಪಾದಕರ ವ್ಯವಸ್ಥಿತ ಸಂಚು ಎನ್ನುವುದು ಎಲ್ಲರಿಗೂ ಮನದಟ್ಟಾಯಿತು. ಅಂದು ತರಗತಿಯಲ್ಲಿ ಈ ಘಟನೆಯದೇ ಚರ್ಚೆ. ಮುಸ್ಲಿಂ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದ ನನ್ನ ಜೊತೆ ಓದುತ್ತಿದ್ದ ರಷ್ಯನ್ ಹುಡುಗಿ "They Deserve every bit of it," ಅಂತ ಅಂದಾಗ ಆಶ್ಚರ್ಯವಾಗಿತ್ತು ಮತ್ತು ಅಲ್ಲಿಂದೀಚೆಗೆ ಜಗತ್ತು ಸಂಪೂರ್ಣ ಬದಲಾಗುತ್ತದೆ ಅಂತ ನನಗೆ ಗೊತ್ತಾಗಿ ಹೋಗಿತ್ತು.
ಅವಘಡ ನಡೆದಾಗ, ತುರ್ತು ಪರಿಸ್ಥಿತಿಗಳಲ್ಲಿ ಅಮೆರಿಕನ್ನರು 911 ಎಂಬ ಸಂಖ್ಯೆಗೆ ಕರೆಮಾಡುತ್ತಾರೆ. ಸೆಪ್ಟೆಂಬರ್ 11ರ ಭಯೋತ್ಪಾದನೆಯನ್ನ ಬಹುಬೇಗ 9/11 ಅಂತ ಮರುನಾಮಕರಣ ಮಾಡಲಾಯಿತು. ಇಡೀ ಪ್ರಪಂಚವೇ ಅಘೋಷಿತ ತುರ್ತು ಪರಿಸ್ಥಿತಿಯಲ್ಲಿರುವಂತೆ ಬಿಂಬಿಸಲಾಯಿತೆಂದು ಐಜಾಜ್ ಅಹಮದ್ ಅಭಿಪ್ರಾಯಪಡುತ್ತಾರೆ. ಎಲ್ಲೆಡೆ ಭಯದ ವಾತಾವರಣ, ಭಯೋತ್ಪಾದನೆ ಹತ್ತಿಕ್ಕುವ ಹೆಸರಲ್ಲಿ ಎಲ್ಲರ ಮೇಲೆ ನಿಗಾ ಇಡುವುದು, ಬಂಧಿಸುವುದು, ವಿಮಾನ ನಿಲ್ದಾಣಗಳಲ್ಲಿ ಮೈ ತಡಕುವುದು ಜಾರಿಗೆ ಬಂದಿತು. ಅಂದಿನಿಂದ ಪ್ರೈವೆಸಿ ಅನ್ನೋದು ಇಲ್ಲವಾಯಿತು. (CIA ಮಾದರಿಯಲ್ಲೇ ಎಲ್ಲ ದೇಶಗಳಲ್ಲೂ ಗುಪ್ತಚರ ಏಜನ್ಸಿಗಳ ಜನನವಾಯಿತು.) ಎಲ್ಲೆಡೆ ಹರಡಿದ್ದ ಭಯ ಮತ್ತು ಸಂದೇಹದ ಭರ್ಜರಿ ಅನುಕೂಲ ಪಡೆದುಕೊಂಡ ಜಾರ್ಜ್ ಬುಷ್ ಮತ್ತೊಮ್ಮೆ ಅಧಿಕಾರಕ್ಕೆ ಬಂದ.
ನನಗೆ ಆ ದಿನಗಳಲ್ಲಿ ಅತಿಯಾಗಿ ಕಾಡಿದ ಕೆಲ ಪ್ರಶ್ನೆಗಳಿದ್ದವು; ಮೂಲಭೂತವಾದವೆಂದರೇನು? ಮೂಲಭೂತವಾದ ಹುಟ್ಟಿಕೊಳ್ಳಲು ಅನುಕೂಲಕರ ವಾತಾವರಣಗಳಾವುವು? ಮೂಲಭೂತವಾದಕ್ಕೆ ಧರ್ಮವೊಂದೇ ಕಾರಣವೇ? Fundamentalism ಕುರಿತು ಸಾಕಷ್ಟು ಓದಿದೆ ಆದರೆ ಮೋಸಿನ್ ಹಮೀದ್ ಬರೆದ “ದ ರಿಲಕ್ಟೆಂಟ್ ಫಂಡಮೆಂಟಲಿಸ್ಟ್” ಕಾದಂಬರಿ ಓದುವವರೆಗೆ ನನಗೆ ಮೂಲಭೂತವಾದದ ಬಗ್ಗೆ ಸ್ಪಷ್ಟತೆ ಇರಲಿಲ್ಲ.
ಹಮೀದ್ ಕಾದಂಬರಿಯ ನಾಯಕ ಚಂಗೇಜ್. ಮೂಲತಃ ಪಾಕಿಸ್ತಾನದ ಲಾಹೋರ್ ನಿವಾಸಿ. ವಿದೇಶದಲ್ಲಿ ನೆಲೆಸಿ ಸುಖಕರ ಜೀವನ ನಡೆಸಬೇಕೆಂಬ ಹೆಬ್ಬಯಕೆ ಅವನಿಗೆ. ಓದಿನಲ್ಲಿ ಅತಿಯಾದ ಶ್ರದ್ದೆ, ಶ್ರಮ. ಆತನ ಅವಿರತ ಶ್ರಮದ ಫಲವಾಗಿ ಅಮೆರಿಕಾದ ಪ್ರತಿಷ್ಠಿತ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುವ ಅವಕಾಶ ದೊರೆಯುತ್ತದೆ. ಅಮೆರಿಕಾದ ಬಗ್ಗೆ ನೂರಾರು ಕನಸುಗಳು ಆತನಲ್ಲಿ. ಬಿಸಿಲಿನ ತಾಪಕ್ಕೆ ಬಹುಬೇಗ ಕರಗಿಹೋಗುವ ಮಂಜುಗಡ್ಡೆಯಂತೆ, ಅಮೆರಿಕಾದ ವಾಸ್ತವ ಚಂಗೇಜ್ ಅದರ ಕುರಿತು ಕಟ್ಟಿಕೊಂಡಿದ್ದ ಭ್ರಮೆಗಳನ್ನೆಲ್ಲಾ ಕರಗಿಸಿಬಿಡುತ್ತದೆ.
ವಿಶ್ವವಿದ್ಯಾಲಯದ ಕಟ್ಟಡಗಳು ಪುರಾತನವಾಗಿ ಕಾಣಲೆಂದು ಎಸಿಡ್ ವಾಷ್ ನೀಡುತ್ತಿರುವುದನ್ನು ಕಾಣುತ್ತಾನೆ. ಇತಿಹಾಸವೇ ಇಲ್ಲದ ದೇಶವೊಂದು ಇತಿಹಾಸ ಸೃಷ್ಟಿಸಲು ಏನೆಲ್ಲಾ ಮಾಡಬಹುದು ಎಂಬುದನ್ನು ಮನಗಾಣುತ್ತಾನೆ. ಸಿಂಧೂ ನಾಗರಿಕತೆಯ ಕಾಲದಲ್ಲಿ ಅಮೆರಿಕಾ ಏನಾಗಿತ್ತೆಂಬ ಗಾಢ ಆಲೋಚನೆಯಲ್ಲಿ ತೊಡಗುತ್ತಾನೆ. ವ್ಯಾಸಂಗ ಮುಂದುವರೆಸಲು ಬೇಕಾದ ಹಣಕ್ಕಾಗಿ ಸಂಜೆಯ ವೇಳೆ ದಕ್ಷಿಣ ಏಶಿಯನ್ ಗ್ರಂಥಾಲಯದಲ್ಲಿ ಕೆಲಸ ಮಾಡಲು ಸೇರಿಕೊಳ್ಳುತ್ತಾನೆ. ಆ ಗ್ರಂಥಾಲಯಕ್ಕೆ ಯಾರೆಂದರೆ ಯಾರೂ ಹೋಗುವುದಿಲ್ಲ. ತಮಗಿಂತ ಭಿನ್ನವಾದ ಸಂಸ್ಕೃತಿ, ಕಲೆ, ಸಾಹಿತ್ಯವನ್ನು ಅಮೆರಿಕಾ ಗಮನಿಸುವುದನ್ನೇ ಬಿಟ್ಟುಬಿಟ್ಟಿದೆ ಅಂತ ಚಂಗೇಜ್ಗೆ ಅನ್ನಿಸತೊಡಗುತ್ತದೆ. ತಮ್ಮ ಧರ್ಮದವರಲ್ಲದ, ದೇಶದವರಲ್ಲದ, ವರ್ಣದವರಲ್ಲದ ಅನ್ಯರ ಬಗ್ಗೆ ಅಮೆರಿಕನ್ನರಿಗೆ ಇರುವ ತಾತ್ಸಾರ ಅಸಡ್ಡೆಗಳ ಅನುಭವವಾಗುತ್ತದೆ.
ಇದೆಲ್ಲದರ ನಡುವೆ ಚಂಗೇಜ್ ಒಳ್ಳೆಯ ಕೆಲಸವನ್ನೇ ಗಿಟ್ಟಿಸಿಕೊಳ್ಳುತ್ತಾನೆ. ಅಂಡರ್ವುಡ್ ಸ್ಯಾಮ್ಸನ್ (US) ಎಂಬ ಕಂಪನಿಯದು. ಹೊಂಚು ಹಾಕಿ ಕಾದು ರೋಗಗ್ರಸ್ತ ಕಂಪನಿಗಳ ವಿವಶವನ್ನೇ ಬಂಡವಾಳವಾಗಿಸಿ ಅತಿ ಕಡಿಮೆ ಬೆಲೆಗೆ ಖರೀದಿ ಮಾಡುವ ಕಂಪನಿಯದು. (ಅಮೆರಿಕಾದ ಇಂಪಿರಿಯಾಲಿಸ್ಟ್ ಅಜೆಂಡಾ ಕೂಡ ಅದೇ ತಾನೆ?) ಒಮ್ಮೆ ರೋಗಗ್ರಸ್ತ ಕಂಪನಿಯ ಟೇಕ್ ಓವರ್ ಪ್ರಕ್ರಿಯೆಗೆಂದು ಮನಿಲಾ ನಗರಕ್ಕೆ ಹೋದಾಗ ಅಲ್ಲಿನ ಕೆಲಸಗಾರನೊಬ್ಬ "ಚಂಗೇಜ್ ನೀನೊಬ್ಬ ಜಾನಿಸಾರಿ ಇದ್ದಹಾಗೆ ಅಲ್ಲವೇ?" ಎಂಬ ಪ್ರಶ್ನೆ ಚಂಗೇಜ್ನನ್ನು ದಂಗುಬಡಿಸುತ್ತದೆ. (ಜಾನಿಸಾರಿಗಳು ಒಟ್ಟೋಮನ್ ಟರ್ಕರ ಬಲಿಷ್ಠ ಕಾಲಾಳುಗಳ ಪಡೆಯಾಗಿತ್ತು. ಈ ಪಡೆ ಅತಿಯಾದ ರಾಜನಿಷ್ಠೆಗೆ ಹೆಸರುವಾಸಿಯಾಗಿತ್ತು ಆದರೆ ಆಶ್ಚರ್ಯವೆಂಬಂತೆ ಈ ಕಾಲುಳುಗಳು ಟರ್ಕರ ದಾಳಿಗೆ ಹತರಾದ ಕ್ರೈಸ್ತರೋ, ಅನಾಥ ಮಕ್ಕಳೋ ಅಥವಾ ಯುದ್ಧದಲ್ಲಿ ಬಂದಿಗಳಾದವರ ಮಕ್ಕಳಾಗಿರುತ್ತಿದ್ದರು. ಇವರಿಗೆ ಕಠಿಣ ತರಬೇತಿ ನೀಡಿ, ಇಸ್ಲಾಂ ಧರ್ಮಕ್ಕೆ ಮತಾಂತರಿಸಿ ಜಾನಿಸಾರಿಗಳನ್ನಾಗಿಸುತ್ತಿದ್ದರು ಎಂಬುದು ಅವರ ಇತಿಹಾಸ.)
ತಮ್ಮ ದೇಶವನ್ನ ತೊರೆದು ಕನಸು ಕಾಣುತ್ತಾ ಅಮೆರಿಕಾಕ್ಕೆ ತೆರಳಿ ಆ ದೇಶದ ಅಭಿವೃದ್ದಿಗೆ ಶ್ರಮಿಸುತ್ತಾ ತನ್ನ ತಾಯ್ನೆಲದ ಮೇಲೆ ಅಮೆರಿಕ ನಿರಂತರವಾಗಿ ನಡೆಸುವ ದಾಳಿಯ ಕುರಿತು ಕುರುಡಾಗುವ ಕಾದಂಬರಿಯ ನಾಯಕ ಚಂಗೇಜ್ಗೆ ಕೂಡ ತಾನೊಬ್ಬ ಜಾನಿಸಾರಿ ಎಂದೆನಿಸುತ್ತದೆ.
ಚಂಗೇಜ್ ಮನಿಲಾದಿಂದ ಕಂಪನಿಯ ಕೆಲಸ ಮುಗಿಸಿ ವಾಪಸ್ ಬರುವ ಹೊತ್ತಿಗೆ 9/11 ಭಯೋತ್ಪಾದನೆ ಘಟಿಸಿ ಬಿಟ್ಟಿರುತ್ತದೆ. ವಿಮಾನ ನಿಲ್ದಾಣಗಳಲ್ಲಿ ಮೈ ತಡಕುವುದು, ಮುಸ್ಲಿಮರನ್ನೂ ಅನುಮಾನದಿಂದ ಕಾಣುವುದು ಸರ್ವೇ ಸಾಮಾನ್ಯವಾಗಿರುತ್ತದೆ. ಎಲ್ಲೆಡೆ ಅಮೆರಿಕದ ಬಾವುಟ ಹಾರಾಡುತ್ತಿರುತ್ತದೆ. ಕಟ್ಟಡಗಳ ಮೇಲೆ, ಅಂಗಡಿಗಳ ಮೇಲೆ, ಮನೆಗಳ ಮೇಲೆ ಎಲ್ಲೆಲ್ಲೂ ಬಾವುಟ! ಪ್ರಪಂಚಾದ್ಯಂತ ಮುಸ್ಲಿಮರನ್ನು ಯಾವುದೇ ಆಧಾರವಿಲ್ಲದೆ ಬಂಧಿಸಿ ಸೆರಮನೆಗಟ್ಟುವುದು ದಿನನಿತ್ಯದ ಸುದ್ದಿಯಾಗುತ್ತದೆ. ಚಂಗೇಜ್ ಗಡ್ಡ ಬೆಳೆಸಿಕೊಳ್ಳುತ್ತಾನೆ, ಕಂಪನಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಅನುಮಾದಿಂದ ಕಾಣುತ್ತದೆ. ಹೀಗೆ ಎಲ್ಲೆಡೆ ಅವಮಾನ ಹಿಯಾಳಿಕೆಗೆ ಗುರಿಯಾಗುತ್ತಾನೆ.
ಈ ನಡುವೆ ಚಂಗೇಜ್ಗೆ ಎರಿಕಾ ಎಂಬಾಕೆಯ ಪರಿಚಯವಾಗುತ್ತದೆ. ಪರಿಚಯ ಪ್ರೀತಿಯಾಗಿ ಬದಲಾಗುತ್ತದೆ. ಪ್ರೀತಿಯ ವಿಷಯದಲ್ಲಿ ಎರಿಕಾಗೆ ಅದು ಎರಡನೇ ಅನುಭವ. ಮೊದಲ ಪ್ರೇಮಿ ಕ್ರಿಸ್ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಮರಣ ಹೊಂದಿರುತ್ತಾನೆ. ಎರಿಕಾ ಚಂಗೇಜ್ನನ್ನು ಇಷ್ಟಪಟ್ಟರೂ ಮನಸ್ಪೂರ್ವಕವಾಗಿ ಒಪ್ಪಿಕೊಳ್ಳಲಾಗುವುದಿಲ್ಲ. ಕ್ರಿಸ್ನನ್ನು ಮರೆಯಲು ಆಕೆಗೆ ಆಗುವುದೇ ಇಲ್ಲ. “ಚಂಗೇಜ್, ನೀನು ಕ್ರಿಸ್ನಂತಾದರೆ ಮಾತ್ರ ನಿನ್ನನ್ನು ವರಿಸುವೆ,” ಎನ್ನುತ್ತಾಳೆ. ಪ್ರಿಯತಮೆಯ ಈ ಅಸ್ವಾಭಾವಿಕ ಬೇಡಿಕೆಯಿಂದ ಆತ ತತ್ತರಿಸಿ ಹೋಗುತ್ತಾನೆ. ಎರಿಕಾಳನ್ನು (ಅಮೆ)ರಿಕಾ ಮತ್ತು ಕ್ರಿಸ್ ಅನ್ನು ಕ್ರಿಶ್ಚಿಯಾನಿಟಿ ಅಂತ ಓದಿಕೊಂಡರೆ ತುಂಬಾ Narcissistic ಆದ, ತಮ್ಮ ಧರ್ಮ ಮತ್ತು ದೇಶವನ್ನು ಬಿಟ್ಟು ಬೇರಾರನ್ನೂ ಪ್ರೀತಿಯಿಂದ ಕಾಣಲಾಗದ, ಆತ್ಮೀಯವಾಗಿ ನಡೆಸಿಕೊಳ್ಳಲಾಗದ ವೈಟ್ ಅಮೆರಿಕನ್ ಜನರ ಚಿತ್ರಣ ಸಿಗುತ್ತದೆ.
ಭ್ರಮನಿರಸನಕ್ಕೊಳಗಾದ ಚಂಗೇಜ್ ತನ್ನ ದೇಶಕ್ಕೆ ಹಿಂದಿರುಗಿ ಲಾಹೋರ್ ವಿಶ್ವವಿದ್ಯಾಲಯದಲ್ಲಿ ಬೋಧಕನಾಗುತ್ತಾನೆ. ಅಮೆರಿಕದ ಶೋಷಕ ಸಾಮ್ರಾಜ್ಯಶಾಹಿ ನೀತಿ ಮತ್ತು ಜಗತ್ತಿನ ದೊಡ್ಡಣ್ಣನೆಂಬ ಧಿಮಾಕಿನ ಕುರಿತು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತಾನೆ. ಹೀಗೆಲ್ಲಾ ಸಾಮ್ರಾಜ್ಯಶಾಹಿಗಳಿಗೆ ವಿರುದ್ಧವಾದ ಪ್ರತಿರೋಧದ ಪೈರುಗಳನ್ನು ನೆಟ್ಟು ಒಳ್ಳೆಯ ಫಸಲು ಪಡೆಯಹೋದರೆ ಅವರು ಸುಮ್ಮನಿರುತ್ತಾರೆಯೇ... ಚಂಗೇಜ್ನನ್ನು ಕೊಲ್ಲಲು ಬಹುಶಃ ಸಿಐಎ ಏಜೆಂಟನನ್ನು ಲಾಹೋರಿಗೆ ಕಳುಹಿಸಿಕೊಡಲಾಗುತ್ತದೆ. ಕೆಫೆಯೊಂದರಲ್ಲಿ ಭೇಟಿ ನಿಗದಿಯಾಗುತ್ತದೆ. ಅಲ್ಲಿ ನಡೆಯುವ ಸಂವಾದವೇ ಈ ಕಾದಂಬರಿ.
ಮೋಸಿನ್ ಹಮೀದನಿಗೆ ಮೂಲಭೂತವಾದದ ಕುರಿತಾಗಿ ಕಾದಂಬರಿಯೊಂದನ್ನು ಬರೆಯುವ ಉದ್ದೇಶವೇ ಇರಲಿಲ್ಲ. ತನ್ನ ಮೊದಲ ಕೃತಿ Moth Smoke ಬರೆದ ನಂತರ ಎರಡನೇ ಕೃತಿಯ Outline ಸಿದ್ಧಪಡಿಸಿದ್ದ ಹಮೀದ್. ಅಷ್ಟರಲ್ಲಿ ಘಟಿಸಿದ 9/11 ಅವನ ಇರಾದೆಯನ್ನು ಬದಲಾಯಿಸುವಂತೆ ಮಾಡಿತು. ಮೊದಲು ಸಿದ್ಧಪಡಿಸಿದ್ದ Outline, ಗೀಚಿದ್ದ ಹತ್ತಾರು ಪುಟಗಳನ್ನು ಹರಿದುಹಾಕಿ ಮೂಲಭೂತವಾದದ ಜಾಡು ಹಿಡಿದು ಹೊರಟ ಹಮೀದ್ ಕೊನೆಗೆ ರಚಿಸಿದ್ದು 'ದ ರಿಲಕ್ಟೆಂಟ್ ಫಂಡಮೆಂಟಲಿಸ್ಟ್' ಎಂಬ ರೋಚಕ ಮತ್ತು Insightful ಕೃತಿಯನ್ನು.
ಜಗತ್ತಿನ ಶ್ರೇಷ್ಠ ಕೃತಿಗಳು ಆ ಕಾಲದ ತುರ್ತಿನಿಂದಲೇ ಹುಟ್ಟಿವೆ ಅನ್ನೋದು ನನ್ನ ವಾದ. ಸಮಾಜದ ಬಿಕ್ಕಟ್ಟು ಬರಹಗಾರರಿಂದ ಬದ್ಧತೆ ನಿರೀಕ್ಷೆ ಮಾಡುತ್ತದೆ. ವರ್ಣಭೇದ ನೀತಿಯ ಪ್ರಕ್ಷುಬ್ಧ ವಾತಾವರಣದ ದಿನಗಳಲ್ಲಿ ಮತ್ತು ಪ್ರಭುತ್ವ ನಿರ್ಭಯವಾಗಿ ದಬ್ಬಾಳಿಕೆ, ಹಿಂಸೆಗಿಳಿದ ಕಾಲದಲ್ಲಿ ಅದರ ವಿರುದ್ಧ ಬರೆಯುತ್ತಿದ್ದ ಆಫ್ರಿಕನ್ ಬರಹಗಾರರನ್ನು ಉದ್ದೇಶಿಸಿ ಚಿನುವಾ ಅಚಿಬೆ ಆಡಿದ ಮಾತುಗಳು ಇಲ್ಲಿ ನೆನಪಾಗುತ್ತವೆ:
"ಬದ್ಧತೆ ನಮ್ಮ ಬರಹಗಳಲ್ಲಿ ಹರಿದಾಡುತ್ತದೆ. ಅವರಿಗೆ ಅರಿವಿದೆಯೋ ಇಲ್ಲವೋ ತಿಳಿದಿಲ್ಲ ಆದರೆ ನಮ್ಮೆಲ್ಲಾ ಬರಹಗಾರರು ಬದ್ಧತೆ ಇರುವ ಬರಹಗಾರರೇ. ಬದ್ಧತೆ ಇಲ್ಲದೆ, ಸಂದೇಶವಿಲ್ಲದೆ, ಪ್ರತಿರೋಧವಿಲ್ಲದೆ ಆಫ್ರಿಕಾದಲ್ಲಿ ಬರೆಯುವುದು ಅಸಾಧ್ಯ."
(ಈ ಬದ್ಧತೆಯ ಹೊರೆ ಆಫ್ರಿಕನ್ ಸಾಹಿತ್ಯದ ಮಿತಿ ಕೂಡ ಅಂತ ಬಹಳಷ್ಟು ವಿದ್ವಾಂಸರು ವಾದಿಸಿದ್ದೂ ಇದೆ. ಆದರೆ ಈ ವಾದವನ್ನು ಸಂದೇಹದಿಂದಲೇ ಸ್ವೀಕರಿಸಬೇಕು. ದುರಿತ ಕಾಲದ ಬೇಡಿಕೆಗಳಿಗೆ ಸ್ಪಂದಿಸದ ಸಾಹಿತ್ಯ ಪಲಾಯನವಾದದ ಸಾಹಿತ್ಯ, ಅದು ಜನರ ನೋವಿಗೆ ವಿಮುಖವಾದ ಸಾಹಿತ್ಯ. ಅಂತಹ ಬರಹಗಾರರನ್ನ ಕೂಡ ತನ್ನ ಆದ್ಯ ಕರ್ತವ್ಯ ನಿರ್ಲಕ್ಷಿಸಿದ ಬರಹಗಾರ ಅಂತಲೇ ಪರಿಗಣಿಸಬೇಕು.)
ಕಾಲದ ತುರ್ತು, ದುರಿತ ಕಾಲ, ಸಾಹಿತ್ಯ/ಬರಹಗಾರರ ಜವಾಬ್ದಾರಿ/ಬದ್ಧತೆ ವಿಷಯ ಬಂದಾಗ ಮೋಸಿನ್ ಹಮೀದ್ ಜೊತೆಗೆ ಮತ್ತೊಂದೆರಡು ಉದಾಹರಣೆ ಕೊಡುವುದು ಸೂಕ್ತ ಅನ್ನಿಸುತ್ತೆ. ಉದಾಹರಣೆಗಳು ವಿಷಯಾಂತರ ಅನಿಸಿದರೂ ಹೇಳಿಬಿಡುವೆ. ಅಮೆರಿಕಾ ಶೀತಲ ಸಮರದ ಕಾಲದ ಕಾವಿನಲ್ಲಿ ವಿಯೆಟ್ನಾಂ ದೇಶದ ಮೇಲೆ ಯುದ್ಧ ಸಾರಿತು. ಮೊದಲಿಗೆ ಬಹುಸಂಖ್ಯೆಯಲ್ಲಿ ಅಮೆರಿಕನ್ ಪ್ರಜೆಗಳು ಈ ಯುದ್ಧಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದರು. ಅತಿಯಾದ ಆಡಂಬರದ, “ರಾಷ್ಟ್ರ”ವೆಂದು ಸದಾ ಎದೆ ಬಡಿದುಕೊಂಡು ಸಾಮಾನ್ಯ ಜನರಿಂದ ತ್ಯಾಗ ಬಲಿದಾನವನ್ನು ಬೇಡುವ ರಾಷ್ಟ್ರಪ್ರೇಮ (Jingoism) ಎಷ್ಟು ಟೊಳ್ಳು ಎಂಬುದನ್ನು ಮತ್ತು ಯುದ್ಧದಾಹಿ ಪ್ರಭುತ್ವ ತನ್ನದೇ ಜನರ ಮೇಲೆ ಎಸಗುವ ಕ್ರೌರ್ಯವನ್ನು ಅಮೆರಿಕನ್ ಕೌಂಟರ್ ಕಲ್ಚರ್ ಭಾಗವಾದ ಬಾಬ್ ಡಿಲನ್ ಅಂಥವರು ಎಳೆಎಳೆಯಾಗಿ ಜನರ ಮುಂದೆ ತೆರೆದಿಟ್ಟು ಜನರ ಮನಪರಿವರ್ತನೆಗೆ ಕಾರಣರಾದರು. ಅಮೆರಿಕಾದ ಎಳೆಯ ಮನಸ್ಸುಗಳ ಮೇಲೆ ಬಾಬ್ ಡಿಲನ್ ಬರೆದ ಜಾನ್ ಬ್ರೌನ್ ಎಂಬ ಹಾಡು ತುಂಬಾ ಆಳವಾಗಿ ಪ್ರಭಾವಿಸಿತು. (ಈ ಹಾಡಿನ ಲಿಂಕ್ ಕೆಳಗಿದೆ)
ವಿಯೆಟ್ನಾಂನ ಮೇಲೆ ಅನೈತಿಕ ಸಮರವನ್ನೇ ಸಾರಿದ್ದ ಅಮೆರಿಕನ್ ಸೇನೆಗೆ ಸೇರುವಂತೆ ಪ್ರೇರೇಪಿಸಿ, ರಾಷ್ಟ್ರ ರಕ್ಷಣೆ ಒಂದು ಮಹತ್ ಕಾರ್ಯವೆಂದು ನಂಬಿದ್ದ ಮಧ್ಯಮ ವರ್ಗದ ತಂದೆ ತಾಯಂದಿರನ್ನು ಕುರಿತು ಬರೆದ ಹಾಡು ಜಾನ್ ಬ್ರೌನ್. ಯುದ್ಧ ಮುಗಿದ ನಂತರ ಸಮವಸ್ತ್ರ ತೊಟ್ಟು ಪದಕಗಳೊಂದಿಗೆ ಎದೆಯುಬ್ಬಿಸಿ ಸ್ಫುರದ್ರೂಪಿ ಮಗ ಬರುವನೆಂಬ ನಿರೀಕ್ಷೆಯಲ್ಲಿರುವ ತಾಯಿಗೆ ಮಗ ಕುರೂಪಿಯಾಗಿ ವೀಲ್ಚೇರ್ನಲ್ಲಿ ಕುಳಿತು ಬರುವುದನ್ನು ನೋಡಿ ಹೃದಯ ಒಡೆದು ಹೋಗುತ್ತದೆ. ಪ್ರಭುತ್ವವನ್ನು ಎದುರುಹಾಕಿಕೊಂಡು, ಪಾಪ್ಯುಲರ್ ನಂಬಿಕೆಗಳ ವಿರುದ್ಧ ಇಂತಹ ಹಾಡೊಂದನ್ನು ಬರೆದು/ಹಾಡುವ ಎದೆಗಾರಿಕೆ ಸಾಮಾಜಿಕ ಬದ್ಧತೆ ಇರುವ ಬರಹಗಾರನಿಗೆ ಮಾತ್ರ ಇರಲು ಸಾಧ್ಯ. Stanley Kubrick ಅವರ ಪಾಥ್ಸ್ ಆಫ್ ಗ್ಲೋರಿ, ಫುಲ್ ಮೆಟಲ್ ಜಾಕೆಟ್ ಮತ್ತು ಟಾಮ್ ಕ್ರೂಜ್ ಅಭಿನಯದ Born on the Fourth of July ನಂತಹ ಯುದ್ಧ ವಿರೋಧಿ ಚಿತ್ರಗಳನ್ನು ಮರೆಯಲಾಗುವುದಿಲ್ಲ.
ಅಚಿಬೆ ಹೇಳಿದ ಬದ್ಧತೆ, ಬಾಬ್ ಡಿಲನ್ಗಿದ್ದ ಎದೆಗಾರಿಕೆ ನನಗೆ ಕಾಣೋದು ಮೋಸಿನ್ ಹಮೀದ್ರಂಥ ಲೇಖಕನಲ್ಲಿ. 9/11 ನಂತರದ ದಿನಗಳಲ್ಲಿ ಇಡೀ ಜಗತ್ತೇ ಇಸ್ಲಾಮೊಫೋಬಿಯಾದಲ್ಲಿ ಮುಳುಗಿ ಮೂಲಭೂತವಾದಕ್ಕೆ ಧರ್ಮ ಮಾತ್ರ ಕಾರಣವೆಂದು, ಗಡ್ಡ ಬಿಟ್ಟು, ಟೋಪಿ ಹಾಕಿದವರೆಲ್ಲಾ ಭಯೋತ್ಪಾದಕರೆಂದು Suspicious ಆಗಿ ನೋಡುವ ಕಾಲದಲ್ಲಿ ತನ್ನ ಕಾದಂಬರಿಯ ಮೂಲಕ ಮೂಲಭೂತವಾದಕ್ಕೆ ಧರ್ಮವನ್ನು ಮೀರಿ ವಿಶ್ವ ಬ್ಯಾಂಕ್ ಅನುಸರಿಸುವ ಆರ್ಥಿಕ ನೀತಿಗಳು, ವ್ಯಾಪಾರೀ ಹಿತಾಸಕ್ತಿಗಳು, ತನ್ನ ಧರ್ಮವೇ/ರಾಷ್ಟ್ರವೇ ಶ್ರೇಷ್ಠವೆಂಬ ಕುರುಡು ನಂಬಿಕೆಯಲ್ಲಿ ಪರರನ್ನು ಕೀಳಾಗಿ ಕಾಣುವ ದುರ್ಗುಣ, ಅತಿಯಾದ ಆಡಂಬರದ ರಾಷ್ಟ್ರಪ್ರೇಮ, ಬಡರಾಷ್ಟ್ರಗಳ ಆಂತರಿಕ ಬಿಕ್ಕಟ್ಟುಗಳಲ್ಲಿ ಮೂಗು ತೂರಿಸುವ ತುರಿಕೆ, ಲಾಭಕ್ಕಾಗಿ ಏನನ್ನು ಬೇಕಾದರೂ ಮಾಡಿಬಿಡುವ ಕಾರ್ಪೊರೇಟ್ ಪ್ರೆಡೇಟಿವ್ ಪ್ರವೃತ್ತಿಗಳು, ಅನ್ಯರ ಮತ್ತವರ ಶ್ರೀಮಂತ ಸಂಸ್ಕೃತಿಗಳ ಬಗ್ಗೆ ಬಲಿಷ್ಠರು ತೋರುವ ಅಸಹನೆ, ಅಸಡ್ಡೆಗಳೆಲ್ಲವೂ ಕಾರಣಗಳು ಎಂದು ತೋರಿದ ಶ್ರೇಯಸ್ಸು ಹಮೀದ್ಗೆ ಸಲ್ಲಬೇಕು.
ಅರಬ್ ರಾಷ್ಟ್ರವಾದ, ಹಲವಾರು ಅರಬ್ ರಾಷ್ಟ್ರಗಳಲ್ಲಿ ಸಕ್ರಿಯವಾಗಿದ್ದ ಕಮ್ಯುನಿಸ್ಟ್ ಅಲಿಪ್ತ ಚಳುವಳಿ, ಅರಬ್ ರಾಷ್ಟ್ರಗಳ ಜನಪದ ಯುಕ್ತಿ ಎಲ್ಲವು ನಾಶವಾಗಿ ಇಸ್ಲಾಮಿಕ್ ಕೋಆಪರೇಶನ್ ಸಂಘಟನೆ, ವರ್ಲ್ಡ್ ಮುಸ್ಲಿಂ ಲೀಗ್, ವಾಹಬಿಸಮ್ ಹುಟ್ಟಿ ಮತ್ತಷ್ಟು ತೀವ್ರವಾದ, ಮೂಲಭೂತವಾದಕ್ಕೆ ಉತ್ತೇಜನ ಸಿಕ್ಕಿದ್ದು ಹೇಗೆ ಎಂಬುದರ ಆಳವಾದ ಓದು/ಅರಿವು ನಮಗಿಂದು ಬೇಕಿದೆ. ಮೂಲಭೂತವಾದಕ್ಕೆ ಧರ್ಮವೊಂದೇ ಕಾರಣವಲ್ಲ ಎಂಬ ಜ್ಞಾನದ ದೀವಿಗೆಯನ್ನು ಮಾತ್ರ ಹಮೀದ್ ತನ್ನ ಕಾದಂಬರಿಯ ಮೂಲಕ ನನ್ನಲ್ಲಿ ಬೆಳಗಿದ್ದಾನೆ.
ಕೃತಿ : ಗುರುತಿನ ಬಾಣಗಳು
ಪುಟ : 390
ಬೆಲೆ : ರೂ. 400
ಖರೀದಿಗೆ ಸಂಪರ್ಕಿಸಿ : 90195 29494
ಡಾ. ಹರೀಶ್ ಎಂ ಜಿ
ಲೇಖಕ ಡಾ. ಹರೀಶ ಎಂ ಜಿ (ಹರೀಶ ಗಂಗಾಧರ) ಬೆಂಗಳೂರಿನ ಸರ್ಕಾರಿ ರಾಮ್ ನಾರಾಯಣ್ ಚೆಲ್ಲಾರಾಂ ವಾಣಿಜ್ಯ ಹಾಗೂ ನಿರ್ವಹಣಾ ಕಾಲೇಜಿನಲ್ಲಿ ಪ್ರಾಧ್ಯಾಪಕರು.
ಮುದ್ರಣಕ್ಕೆ/ಬಿಡುಗಡೆಗೆ ಸಿದ್ಧವಾಗುತ್ತಿರುವ ನಿಮ್ಮ ಕೃತಿಗಳ ಆಯ್ದ ಭಾಗಗಳ ಪ್ರಕಟಣೆಗಾಗಿ ಸಂಪರ್ಕಿಸಿ team@konaru.org