ಕೇಡಿನ ಭಾಷೆಯೇ ಆಡುಭಾಷೆಯಾದಾಗ…
ನಿತ್ಯಾನಂದ ಬಿ ಶೆಟ್ಟಿಯವರ 'ಅಳವು ಅರಿಯದ ಭಾಷೆ' ಪುಸ್ತಕಕ್ಕೆ ಇಸ್ಮಾಯಿಲ್ ಅವರ ಪ್ರತಿಕ್ರಿಯೆ
ಇತ್ತೀಚೆಗೆ ಹೊರಬಂದ ಡಾ. ನಿತ್ಯಾನಂದ ಬಿ ಶೆಟ್ಟಿಯವರ ಅಳವು ಅರಿಯದ ಭಾಷೆ: ಕಲೆ, ಸಮಾಜ, ಇತಿಹಾಸ ಪುಸ್ತಕ ಕನ್ನಡದ ಬೌದ್ಧಿಕ ವಲಯದಲ್ಲಿ ಚರ್ಚೆಗೆ ಒಳಗಾಗುತ್ತಿದೆ. ಯಕ್ಷಗಾನವನ್ನು ಹಿನ್ನೆಲೆಯಾಗಿಟ್ಟುಕೊಂಡು ಕರಾವಳಿಯ ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ಬೆಳವಣಿಗೆಗಳನ್ನು, ಬಿಕ್ಕಟ್ಟುಗಳನ್ನು ಗ್ರಹಿಸಿಕೊಳ್ಳುವ ಪ್ರಯತ್ನವನ್ನು ಈ ಪುಸ್ತಕ ಮಾಡುತ್ತದೆ. ಪ್ರಕಟಣೆಗೆ ಮುನ್ನ ಪುಸ್ತಕದ ಕರಡನ್ನು ಓದಿದ್ದ ಎನ್. ಎ. ಎಂ. ಇಸ್ಮಾಯಿಲ್ ಅವರ ಸುದೀರ್ಘ ಪ್ರತಿಕ್ರಿಯೆ ಕೆಳಗಿದೆ. ಇದು ಪುಸ್ತಕದ ಭಾಗವೂ ಆಗಿದೆ. ತಿಳಿವಳಿಕೆಯನ್ನು ಹೆಚ್ಚಿಸಿ ಯೋಚಿಸಲು ಹಚ್ಚುವ ಇಸ್ಮಾಯಿಲ್ ಅವರ ಬರಹವನ್ನೂ ನಿತ್ಯಾನಂದ ಬಿ ಶೆಟ್ಟಿಯವರ ಪುಸ್ತಕವನ್ನೂ ಓದಿ. ಇನ್ನಷ್ಟು ಒಳ್ಳೆಯ ಚರ್ಚೆಗಳು ನಡೆಯಲಿ.
1
ಸ್ವವಿವರಗಳೊಂದಿಗೆ ಈ ಬರಹವನ್ನು ಆರಂಭಿಸುವ ಅನಿವಾರ್ಯ ನನಗಿದೆ. ನಾನು ಹುಟ್ಟಿಬೆಳೆದದ್ದು ಹಾಸನ ಜಿಲ್ಲೆಯ ಮಲೆನಾಡು ಪ್ರದೇಶದ ಪುಟ್ಟ ಗ್ರಾಮದಲ್ಲಿ. ಅದೆಷ್ಟು ಪುಟ್ಟದೆಂದರೆ ಅಲ್ಲಿದ್ದದ್ದು ನಮ್ಮದೊಂದೇ ಮನೆ. ಆ ಗ್ರಾಮಕ್ಕೆ ಅದರದ್ದೇ ಆದ ಒಂದು ಹೆಸರಿದ್ದರೂ ಅದು ದಾಖಲೆಗಳಿಗೆ ಮಾತ್ರ ಸೀಮಿತ. ನಮ್ಮ ಗುರುತೆಲ್ಲವೂ ಪಕ್ಕದ ಸ್ವಲ್ಪ ದೊಡ್ಡ ಊರು ನಲ್ಲೂರಿನದ್ದೇ. ಅದು ಮತ್ತು ಅದರಾಚೆಗಿನ ಮೂರ್ನಾಲ್ಕು ಕಿಲೋಮೀಟರಿನ ಸುತ್ತಳತೆಯಲ್ಲಿರುವ ಹಳ್ಳಿಗಳನ್ನೆಲ್ಲಾ ಸೇರಿಸಿಕೊಂಡು ನೋಡಿದರೂ ನಮ್ಮದೊಂದೇ ಮುಸ್ಲಿಂ ಕುಟುಂಬ. ಶುಕ್ರವಾರದ ನಮಾಜಿಗಾಗಿ ನಮ್ಮ ತಂದೆ ಕನಿಷ್ಠ ಆರು ಕಿಲೋಮೀಟರುಗಳಷ್ಟು ದೂರವನ್ನು ನಡೆದೋ ಸೈಕಲ್ನಲ್ಲೋ ಸಾಗಬೇಕಾಗಿತ್ತು. ದಸರೆ ಮತ್ತು ಬೇಸಿಗೆಯ ರಜಾ ಕಾಲದ ಶುಕ್ರವಾರಗಳಂದು ಮತ್ತು ಈದ್ನ ದಿನಗಳಲ್ಲಿ ನಮಗೂ ಮಸೀದಿಯಲ್ಲಿ ನಮಾಜು ಮಾಡುವ ಅವಕಾಶ ಸಿಗುತ್ತಿತ್ತು. ಇದನ್ನು ಹೊರತುಪಡಿಸಿದರೆ ಅರಬಿ ಲಿಪಿಯಲ್ಲಿದ್ದ ಕುರಾನ್ ಅನ್ನು ಓದುವುದರಿಂದ ತೊಡಗಿ ಅರಬಿ ಮಲಯಾಳಂ ಲಿಪಿಯಲ್ಲಿದ್ದ ಪುಸ್ತಕಗಳ ಮೂಲಕ ‘ಧಾರ್ಮಿಕ ಶಿಕ್ಷಣ’ವನ್ನು ಪಡೆಯುವ ಅಷ್ಟೂ ಕ್ರಿಯೆ ನಡೆದದ್ದು ಮನೆಯಲ್ಲೇ. ಮೂರ್ನಾಲ್ಕು ಕಿಲೋಮೀಟರುಗಳಷ್ಟು ದೂರದಲ್ಲಿದ್ದ ಒಂದೆರಡು ಮುಸ್ಲಿಂ ಕುಟುಂಬಗಳ ಮಕ್ಕಳನ್ನು ಒಟ್ಟು ಸೇರಿಸಿ, ಮಂಗಳೂರು ಕಡೆಯಿಂದ ಬಂದ ‘ಉಸ್ತಾದ’ರ ಮೂಲಕ ಧಾರ್ಮಿಕ ಶಿಕ್ಷಣ ಕೊಡಿಸುವ ಪ್ರಯತ್ನಗಳು ಹಲವು ಬಾರಿ ವಿಫಲವಾದದ್ದರಿಂದ ನಾವು ಮೂರು ಮಕ್ಕಳಿಗೂ ಮನೆಯೇ ‘ಮದ್ರಸಾ’ ಆಗಿತ್ತು.
ಮುಂದೆ ಹೈಸ್ಕೂಲು ಮತ್ತು ಕಾಲೇಜು ಶಿಕ್ಷಣಗಳಿಗಾಗಿ ಹಳ್ಳಿಯನ್ನು ತೊರೆದು ಹತ್ತಿರದ ದೊಡ್ಡ ಊರು ಮತ್ತು ಹಾಸನ ನಗರವನ್ನೇ ಸೇರಿದ ನಂತರವೂ ‘ಮುಸ್ಲಿಂ’ ಎಂಬ ಗುರುತು ಹೆಸರಿನಲ್ಲಿತ್ತೇ ಹೊರತು ಅದೊಂದು ‘ವಿಶಿಷ್ಟ ಗುರುತು’ ಎಂಬ ಅರಿವು ಮೂಡುವಂಥ ಅನುಭವಗಳೇ ನನಗಿರಲಿಲ್ಲ… ನನಗಿದ್ದ ವಿವಿಧ ಜಾತಿಯ ಗೆಳೆಯರೂ ಅವರ ಮನೆಯವರು ಮನೆಯಲ್ಲಿ ಮಾಂಸದಡುಗೆ ಮಾಡುವ ಹಬ್ಬಗಳಲ್ಲಿ “ನಿಮ್ಮ ಜಾತಿಯವರು ನಾವು ಮಾಡುವ ಮಾಂಸದ ಅಡುಗೆ ತಿನ್ನುವುದಿಲ್ಲ,” ಎಂದು ಹೇಳುತ್ತಿದ್ದುದನ್ನು ಬಿಟ್ಟರೆ ‘ಮುಸ್ಲಿಂ’ ಗುರುತಿನ ವಿಚಾರ ಬರುತ್ತಲೇ ಇರಲಿಲ್ಲ. ಕೆಲವು ಗೆಳೆಯರ ಮನೆಯಲ್ಲಂತೂ “ನಿನಗಾಗಿಯೇ ‘ಬಿಸ್ಮಿಲ್ಲಾ’ ಮಾಡಿದ ಮಟನ್ ತಂದಿದ್ದೇವೆ,” ಎಂದು ಉಪಚರಿಸುವಾಗಲೂ ನನಗೆ ‘ಸಹಿಷ್ಣುತೆ’, ‘ಸೌಹಾರ್ದ’ಗಳಂಥ ಪದಗಳನ್ನು ನೆನಪಿಸಿಕೊಳ್ಳಬೇಕಾಗಿ ಬಂದಿರಲಿಲ್ಲ. ಈ ಪದಗಳೆಲ್ಲಾ ನನಗೆ ಅರ್ಥವಾಗಲು ತೊಡಗಿದ್ದೇ ನಾನು ಉದ್ಯೋಗಕ್ಕೆಂದು ಮಂಗಳೂರಿಗೆ ಬಂದಮೇಲೆ.
ಪದವಿ ಮುಗಿಸಿ ಹಲವು ವ್ಯರ್ಥ ಸಾಹಸಗಳಲ್ಲಿ ಒಂದೆರಡು ವರ್ಷ ಕಳೆದು ಮಂಗಳೂರು ತಲುಪಿದ ನನಗೆ ಊರೇನೂ ಅಪರಿಚಿತವಾಗಿರಲಿಲ್ಲ. ನನ್ನ ತಾಯಿಯ ಹುಟ್ಟೂರು ದೇರಳಕಟ್ಟೆ ಸಮೀಪದ ಬೆಳ್ಮ. ಅಲ್ಲಿರುವ ಮಸೀದಿಗೆ ನೂರಾರು ವರ್ಷಗಳ ಇತಿಹಾಸವಿರುವುದನ್ನು ತಾಯಿಯ ಬಾಯಿಂದಲೇ ಕೇಳಿದ್ದೆ. ತಾಯಿಯ ದೂರದ ಸಂಬಂಧಿಕರಷ್ಟೇ ಅಲ್ಲಿದ್ದುದರಿಂದ ವಿಶೇಷ ಸಮಾರಂಭಗಳ ಸಂದರ್ಭದಲ್ಲಿ ಹಾಜರಿ ಹಾಕುವುದನ್ನು ಹೊರತುಪಡಿಸಿದರೆ ಅದಕ್ಕಿಂತ ದೊಡ್ಡ ಸಂಬಂಧಗಳೂ ಆ ಊರಿನ ಜೊತೆಗೆ ನಮಗಿರಲಿಲ್ಲ. ಈ ಸಂಬಂಧಿಕರಲ್ಲಿ ಅನೇಕರು ನಮ್ಮೆದುರೇ “ಈ ಮಕ್ಕಳು ‘ದೀನ್’ (ಪರಲೋಕ) ಮತ್ತು ‘ದುನಿಯಾವು’ (ಇಹಲೋಕ) ಎರಡೂ ಇಲ್ಲದ ಗಟ್ಟದ ಮೇಲಿನ ಹಳ್ಳಿಯಲ್ಲಿ ಬೆಳೆಯುತ್ತಿದ್ದಾರೆ,” ಎಂದು ಹೇಳುತ್ತಿದ್ದರು. ಆದರೆ ಕುರಾನನ್ನೂ, ದೀನಿಯಾತ್, ಅಖಲಾಕ್ಗಳೆಂಬ ಪುಸ್ತಕಗಳನ್ನು ಅವರ ಮಕ್ಕಳಂತೆಯೇ ಓದಲು ಅರಿತದ್ದನ್ನು ಕುತೂಹಲದಿಂದಲೂ ಕಾಣುತ್ತಿದ್ದರು.
ನಾನು ವೃತ್ತಿಗಾಗಿ ಮಂಗಳೂರು ತಲುಪುವ ಹೊತ್ತಿಗೆ ಬಾಬರಿ ಮಸೀದಿ ಉರುಳಿಯಾಗಿತ್ತು. ‘ನಾವು’ ಮತ್ತು ‘ಅವರು’ ಎಂಬ ಪರಿಭಾಷೆ ಸುಪ್ತವಾಗಿ ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಂಡಿರುವುದು ನನ್ನ ಅನುಭವಕ್ಕೆ ಬರುತ್ತಿತ್ತು. ಆ ಹೊತ್ತಿಗಾಗಲೇ ಅಳಿವಿನ ಅಂಚಿನಲ್ಲಿದ್ದ ‘ಮುಂಗಾರು’ ಪತ್ರಿಕೆಯನ್ನು ಹೊರತುಪಡಿಸಿದರೆ ಮತ್ತೆ ಉಳಿದೆಲ್ಲಾ ಪತ್ರಿಕೆಗಳೂ ‘ಸಂಘ’ದ ಜೊತೆಗೆ ಸೌಹಾರ್ದ ಸಂಬಂಧವನ್ನೇ ಉಳಿಸಿಕೊಂಡಿದ್ದವು. ಸಂಜೆ ಪತ್ರಿಕೆಗಳ ಹೆಡ್ಲೈನ್ ಮೇಲಾಟವಂತೂ ತಾರಕ ಸ್ಥಿತಿಯಲ್ಲಿತ್ತು. ಈ ದಿನಗಳಲ್ಲೇ ಯಕ್ಷಗಾನದ ಸರಿಯಾದ ಪರಿಚಯ ನನಗಾಯಿತು. ಪತ್ರಿಕಾ ವೃತ್ತಿಗೆ ಸೇರುವ ಮೊದಲು ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿದ್ದ ವಾತಾವರಣ ಇದಕ್ಕೊಂದು ಕಾರಣವಾದರೆ, ಈ ದಿನಗಳಲ್ಲಿ ನನಗೆ ದೊರೆತ ರಾಘವೇಂದ್ರ ಎಂಬ ಗೆಳೆಯ ಮತ್ತೊಂದು ಕಾರಣ. ಹಾಸನ ಜಿಲ್ಲೆಯ ಮಲೆನಾಡು ಪ್ರದೇಶದವರಿಗೆ ಯಕ್ಷಗಾನವೇನು ಅಪರಿಚಿತವಲ್ಲ. ನಮ್ಮೂರು ಮತ್ತು ಹತ್ತಿರದ ಊರುಗಳಲ್ಲಿ ಊರವರೇ ತಿಂಗಳಾನುಗಟ್ಟಳೆ ಸಿದ್ಧತೆ ನಡೆಸಿ ಆಡುತ್ತಿದ್ದ ಶನಿಪ್ರಭಾವ, ಕುರುಕ್ಷೇತ್ರ, ತ್ರಿಜನ್ಮಮೋಕ್ಷ, ಸಂಪೂರ್ಣ ರಾಮಾಯಣಗಳಂಥ ಜಗಮಗಿಸುವ ‘ಸೀನರಿ’ಗಳಿದ್ದ ಪೌರಾಣಿಕ ನಾಟಕಗಳು ನೀಡುತ್ತಿದ್ದ ಸಂತೋಷ ನನಗೆ ಯಕ್ಷಗಾನದಲ್ಲಿ ಯಾವತ್ತೂ ಸಿಕ್ಕಿರಲಿಲ್ಲ. ಕರಾವಳಿ ಮೂಲದವರು ಆಡಿಸುತ್ತಿದ್ದ ಹರಕೆಯ ‘ಆಟ’ಗಳನ್ನು ರಾತ್ರಿ ಪೂರ್ತಿ ನೋಡುವ ನನ್ನ ಯಾವ ಪ್ರಯತ್ನವೂ ಯಶಸ್ವಿಯಾಗಿರಲಿಲ್ಲ.
ಆದರೆ ಮಂಗಳೂರಿನಲ್ಲಿ ನಾನು ಕೆಲಸ ಮಾಡುತ್ತಿದ್ದ ಕಚೇರಿಯ ಮಾಲೀಕರಾದ ಕೆ. ಜಯರಾಮಶೆಟ್ಟರು ಬಹಳ ದೊಡ್ಡ ಯಕ್ಷಗಾನಾಭಿಮಾನಿ. ತಾಳಮದ್ದಲೆ ಕ್ಯಾಸೆಟ್ಗಳ ದೊಡ್ಡದೊಂದು ಸಂಗ್ರಹವೇ ಅವರಲ್ಲಿತ್ತು. ಹಿರಿಯ ಸಹೋದ್ಯೋಗಿ ಜಯಶಂಕರ ಭಟ್ಟರೂ ಅಷ್ಟೇ. ಎಲ್ಲದಕ್ಕಿಂತಲೂ ಹೆಚ್ಚಾಗಿ ಈ ಇಬ್ಬರಿಗೂ ಇದ್ದ ಪುರಾಣ ಜ್ಞಾನ ಅಪಾರ. ಭಾರತ ದರ್ಶನ ಪ್ರಕಾಶನದವರು ಪ್ರಕಟಿಸಿದ್ದ ರಾಮಾಯಣ, ಮಹಾಭಾರತ ಮತ್ತು ಭಾಗವತದ ಎಲ್ಲಾ ಸಂಪುಟಗಳೂ ಕಚೇರಿಯಲ್ಲೇ ಇದ್ದವು. ಕುವೆಂಪು ಅವರು ವಯಸ್ಕರ ಶಿಕ್ಷಣ ಸಮಿತಿಗಾಗಿ ಬರೆದ ‘ವಾಲ್ಮೀಕಿ ರಾಮಾಯಣʼ ಮತ್ತು ಕೃಷ್ಣಶಾಸ್ತ್ರಿಗಳ ʼವಚನಭಾರತʼ ಓದಿ ರಾಮಾಯಣ ಮತ್ತು ಮಹಾಭಾರತಗಳ ಕತೆ ಚೆನ್ನಾಗಿ ಗೊತ್ತು ಎಂದುಕೊಂಡಿದ್ದ ನನ್ನ ಅಹಂಕಾರದ ಬೆಲೂನಿಗೆ ಈ ಸಂಪುಟಗಳು ಸೂಜಿ ಚುಚ್ಚಿದ್ದವು. ಇರಾವತಿ ಕರ್ವೆಯವರ ‘ಯುಗಾಂತ’ದ ಪರಿಚಯವಾದದ್ದೂ ಇದೇ ಕಾಲಘಟ್ಟದಲ್ಲಿ. ಕ್ಯಾಸೆಟ್ ತಾಳಮದ್ದಲೆಗಳ ಹಂತದಿಂದ ಟೌನ್ಹಾಲ್ ಸೇರಿದಂತೆ ಮಂಗಳೂರಿನಲ್ಲಿ ನಡೆಯುತ್ತಿದ್ದ ತಾಳಮದ್ದಲೆ ಕೂಟಗಳ ಲೈವ್ ಕೇಳುಗನಾಗುವ ಮಟ್ಟಕ್ಕೆ ಏರಿದೆ. ಮಂಗಳಾದೇವಿ ದೇಗುಲದಲ್ಲಿ ನಿತ್ಯವೆಂಬಂತೆ ನಡೆಯುತ್ತಿದ್ದ ಕೂಟಗಳನ್ನು ಕೇಳಿಸಿಕೊಳ್ಳುವ ಉತ್ಸಾಹವಿದ್ದ ಆ ದಿನಗಳಲ್ಲೇ ನನಗೆ ರಾಘವೇಂದ್ರ ಪರಿಚಯವಾದದ್ದು.
ಆ ಹೊತ್ತಿಗಾಗಲೇ ಬಿಜೆಪಿಯ ಅಧಿಕೃತ ಕಲಾವಿದರೇ ಆಗಿಬಿಟ್ಟಿದ್ದ ಕುಂಬಳೆ ಸುಂದರರಾಯರಿಗೂ ಈ ರಾಘವೇಂದ್ರ ಹತ್ತಿರದ ಸಂಬಂಧಿ. ಈತನ ತಂದೆಯೂ ಯಕ್ಷಗಾನ ಕಲಾವಿದರು. ಪರಸ್ಪರ ಭಿನ್ನ ರಾಜಕೀಯ ಧ್ರುವಗಳಲ್ಲಿ ನಿಂತು ಜಗಳವಾಡಿಕೊಳ್ಳುತ್ತಲೇ ನಮ್ಮ ಗೆಳೆತನ ಗಾಢವಾಗುತ್ತ ಹೋಯಿತು. ಅದರ ಜೊತೆಗೆ ಯಕ್ಷಗಾನದ ಜೊತೆಗಿನ ಸಂಬಂಧವೂ ಬೆಳೆಯುತ್ತಾ ಹೋಯಿತು. ರಾತ್ರಿಯಿಡೀ ಆಟ ನೋಡುವ ಆತನ ಹುಚ್ಚು ನನಗೂ ನಿಧಾನವಾಗಿ ಆವರಿಸಿಕೊಂಡಿತು. ತೊಂಬತ್ತರ ದಶಕದ ಆರಂಭದ ವರ್ಷಗಳಲ್ಲಿ ನನಗಿದು ಅರ್ಥವಾಗದ ಕಲೆ ಎಂದುಕೊಂಡಿದ್ದ ಯಕ್ಷಗಾನ, ಅದೇ ದಶಕದ ಮಧ್ಯಭಾಗವನ್ನು ತಲುಪುವ ಹೊತ್ತಿಗೆ ಇಷ್ಟಪಟ್ಟು ಆಸ್ವಾದಿಸುವ ಕಲೆಯಾಯಿತು. ಯಕ್ಷಗಾನದೊಳಗೆ ನಡೆಯುತ್ತಿದ್ದ ರಾಜಕೀಯ ಪಲ್ಲಟಗಳು ಸ್ಪಷ್ಟವಾಗಿ ಕಾಣತೊಡಗಿದ ಕಾಲಘಟ್ಟವೂ ಇದುವೆ. ಕುಂಬಳೆ ಸುಂದರರಾಯರು ಸುರತ್ಕಲ್ ವಿಧಾನಸಭಾ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದರು. ದಕ್ಷಿಣಕನ್ನಡ ಜಿಲ್ಲೆಯ ಬಹುತೇಕ ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ವಶಪಡಿಸಿಕೊಂಡ ಚುನಾವಣೆ ಅದಾಗಿತ್ತು. ಬಿಜೆಪಿಯ ಈ ರಾಜಕೀಯ ಗೆಲುವಿನ ಹಿಂದೆ ಯಕ್ಷಗಾನದಂಥ ಕಲೆಯಿಂದ ಆರಂಭಿಸಿ ಬಲಪಂಥೀಯ ಪರಿಭಾಷೆಯನ್ನು ಸುದ್ದಿಯ ಭಾಷೆಯನ್ನಾಗಿಸಿಕೊಂಡ ಸುದ್ದಿ ಮಾಧ್ಯಮಗಳ ಕಾಣಿಕೆಯೂ ದೊಡ್ಡದೇ ಇತ್ತು. ವಿವಿಧ ಮತಗಳ ಸಮನ್ವಯ ಭೂಮಿಯಾಗಿದ್ದ ಪ್ರದೇಶ ಕೋಮು ಸಂಘರ್ಷಗಳಿಗೆ ಹೆಸರಾಗಲು ತೊಡಗಿತು.
ಕರಾವಳಿ ಕರ್ನಾಟಕದಲ್ಲಿ ನಡೆದ ಈ ಸಾಮಾಜಿಕ ಮತ್ತು ರಾಜಕೀಯ ಪಲ್ಲಟಗಳು ನನಗೆ ಪದೇ ಪದೇ ನೆನಪಿಸಿದ್ದು ನನ್ನ ಮುಸ್ಲಿಂ ಗುರುತನ್ನು.ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಮಂಗಳೂರಿಗೆ ಬರುವ ತನಕವೂ ನಾನು ಬರೇ ಮುಸ್ಲಿಂ ‘ಜಾತಿ’ಯವನೆಂಬ ಗುರುತನ್ನಷ್ಟೇ ಹೊಂದಿದ್ದೆ. ತೊಂಬತ್ತರ ದಶಕದ ಮಂಗಳೂರು ನನ್ನನ್ನು ‘ಅನ್ಯಮತೀಯ’ನನ್ನಾಗಿಸಿತು. ಆ ದಿನಗಳಲ್ಲಿ ಕರಾವಳಿಯಿಂದ ಪ್ರಕಟವಾಗುತ್ತಿದ್ದ ಸುದ್ದಿ ಮಾಧ್ಯಮಗಳಲ್ಲಿ ಮಾತ್ರ ಬಳಕೆಯಾಗುತ್ತಿದ್ದ ‘ಅನ್ಯಮತೀಯ’ ಎಂಬ ಪದ ಈಗ ಕನ್ನಡ ನಾಡಿನ ಎಲ್ಲಾ ಮಾಧ್ಯಮಗಳಲ್ಲೂ ನಿತ್ಯವೆಂಬಂತೆ ಬಳಕೆಯಾಗುತ್ತದೆ. ಈ ‘ಅನ್ಯ’ರಲ್ಲಿರುವುದು ಯಾರೆಂದು ಈಗ ವಿವರಿಸಬೇಕಾದ ಅಗತ್ಯವೂ ಇಲ್ಲದಷ್ಟೂ ಎಲ್ಲವೂ ಸ್ಪಷ್ಟವಾಗಿಬಿಟ್ಟಿದೆ.
ಮಿತ್ರ ಡಾ. ಬಿ. ನಿತ್ಯಾನಂದ ಶೆಟ್ಟಿ ತಮ್ಮ ಕೃತಿಯ ಮೊದಲ ಆವೃತ್ತಿಯನ್ನು ಕಳುಹಿಸಿಕೊಟ್ಟು ʼನೀವು ಪ್ರತಿಕ್ರಿಯಿಸಿʼ ಎಂದಾಗ ನಾನು ಮರುಮಾತನಾಡದೆ ಒಪ್ಪಿಕೊಂಡೆ. ಪಠ್ಯವನ್ನು ಓದಿ ಮುಗಿಸಿದ ಮೇಲೆ ನನ್ನನ್ನು ಆವರಿಸಿಕೊಂಡದ್ದು ಅಕ್ಷರಗಳಲ್ಲಿ ಅಭಿವ್ಯಕ್ತಿಸಲಾಗದ ವಿಷಾದ. ಹಾಗಾಗಿಯೇ ಏನೂ ಬರೆಯದೆಯೇ ಹಲವು ತಿಂಗಳುಗಳನ್ನು ತಳ್ಳಿದೆ. ನನ್ನ ಪ್ರತಿಕ್ರಿಯೆಯನ್ನು ಲೇಖಕರು ಮರೆತೇಬಿಟ್ಟಿದ್ದಾರೆ ಎಂದು ನಾನು ಭಾವಿಸುವ ಹೊತ್ತಿಗಾಗಲೇ ಅವರಿಂದ ವಾಟ್ಸ್ಆ್ಯಪ್ ಸಂದೇಶ ಬರುತ್ತಿತ್ತು. ಎಷ್ಟೋ ಬಾರಿ ನಾನದಕ್ಕೆ ಉತ್ತರ ಕೊಡುವ ಗೋಜಿಗೂ ಹೋಗಿರಲಿಲ್ಲ. ಆದರೆ ನಿತ್ಯಾನಂದ ಶೆಟ್ಟರ ತಾಳ್ಮೆ ಅದಮ್ಯ. ಅದಾವ ವಿಶ್ವಾಸದಲ್ಲೋ ‘ಕೃತಿಯನ್ನು ಸಂಪೂರ್ಣ ಪರಿಷ್ಕರಿಸಿದ್ದೇನೆ ಇದನ್ನೊಮ್ಮೆ ಓದಿ ಮತ್ತು ತಪ್ಪದೇ ಪ್ರತಿಕ್ರಿಯಿಸಿ’ ಎಂದು ಕೊನೆಯ ಎಚ್ಚರಿಕೆ ಕೊಟ್ಟರು.
‘ಯಕ್ಷಗಾನದ ಸಾಂಸ್ಕೃತಿಕ ಉತ್ಖನನ’ವನ್ನು ಓದಿ ಮುಗಿಸಿದಾಗ ನನಗೆ ನೆನಪಾದದ್ದು ವಸಾಹತೋತ್ತರ ಚಿಂತಕ ಎಡ್ವರ್ಡ್ ಸೈದ್ನ ‘Exile’ ಪರಿಕಲ್ಪನೆ. ಇದನ್ನು ‘ತಾಯ್ನೆಲದಿಂದ ನಿರ್ವಸಿತನಾಗುವುದು’ ಎಂದು ಕನ್ನಡಕ್ಕೆ ಅನುವಾದಿಸಿಕೊಳ್ಳಬಹುದಾದರೂ ಸೈದ್ ಮಂಡಿಸುವ ‘exile’ ಕೇವಲ ಅಕ್ಷರಾರ್ಥಕ್ಕೆ ಸೀಮಿತಗೊಳ್ಳುವುದಿಲ್ಲ. ಅದೊಂದು ರೂಪಕವಾಗಿ ವಿಸ್ತರಿಸಿಕೊಳ್ಳುತ್ತದೆ. ಅವನೇ ಮಾತಿನಲ್ಲಿ ಹೇಳುವುದಾದರೆ “Exile for the intellectual in this sense is restlessness, movement, constantly being unsettled, and unsettling others.”1
ನಿತ್ಯಾನಂದ ಶೆಟ್ಟರಿಗೆ ಯಕ್ಷಗಾನದ ಜೊತೆಗೊಂದು ಸಾವಯವ ಸಂಬಂಧವಿದೆ. ಅದರ ಸಾಂಸ್ಕೃತಿಕ ಉತ್ಖನನಕ್ಕೆ ತೊಡಗುವ ಕ್ರಿಯೆ ಸಾಧ್ಯವಾಗುವುದು ಪ್ರಜ್ಞಾಪೂರ್ವಕವಾದ ‘Exile’ನ ಮೂಲಕ ಮಾತ್ರ. ಅದನ್ನು ಸಾಧಿಸುವ ಮೂಲಕ ಅವರು ತಮ್ಮ ಚಡಪಡಿಕೆಯನ್ನು ಓದುವ ನಮಗೂ ವರ್ಗಾಯಿಸಿದ್ದಾರೆ ಎಂದು ಹೇಳುವುದು ಅತಿಶಯದ ಮಾತಾಗಲಾರದು.
2
‘ಮಾರ್ಕ್ಸ್ವಾದಿ ಅನುಭಾವಿ’ ಎಂಬ ವಿಶೇಷಣದೊಂದಿಗೆ ಗುರುತಿಸಲಾಗುವ ಜರ್ಮನ್ ಮೂಲದ ತತ್ವಶಾಸ್ತ್ರಜ್ಞ ವಾಲ್ಟರ್ ಬೆಂಜಮಿನ್ ಫ್ಯಾಸಿಸಂ ಹೇಗೆ ರಾಜಕೀಯವನ್ನು ಬದಲಾಯಿಸುತ್ತದೆ ಎಂಬುದನ್ನು ಬಹಳ ಚೆನ್ನಾಗಿ ವಿವರಿಸಿದ್ದಾನೆ. ಅಡಾಲ್ಫ್ ಹಿಟ್ಲರ್ ಚಾನ್ಸಲರ್ ಹುದ್ದೆಗೆ ಏರಿದ್ದರ ಹಿಂದೆಯೇ ಜರ್ಮನಿ ತೊರೆದ ವಾಲ್ಟರ್ ಬೆಂಜಮಿನ್ ಕೆಲಕಾಲ ಪ್ಯಾರಿಸ್ನಲ್ಲಿ ನೆಲೆಸಿದ್ದ. ಆ ದಿನಗಳಲ್ಲಿ ಇಟಲಿಯ ಮುಸೋಲಿನಿ ಮತ್ತು ಜರ್ಮನಿಯಲ್ಲಿ ಹಿಟ್ಲರ್ ನಡೆಸುತ್ತಿದ್ದ ಪ್ರಚಾರಾಂದೋಲನಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ ಬರೆದ ‘The Work of Art in the Age of Mechanical Reproduction’2 ಎಂಬ ಶೀರ್ಷಿಕೆಯ ಪ್ರಬಂಧ 1936ರಲ್ಲಿ ಪ್ರಕಟವಾಯಿತು. ಸಿನಿಮಾ, ಫೋಟೊಗ್ರಫಿ, ರೇಡಿಯೊ ಮುಂತಾದ ಸಮೂಹ ಮಾಧ್ಯಮಗಳನ್ನು ಬಳಸಿಕೊಂಡು ರಾಜಕೀಯವನ್ನು ಒಂದು ದೃಶ್ಯ ಚಮತ್ಕಾರವನ್ನಾಗಿ ಬದಲಾಯಿಸುವ ಫ್ಯಾಸಿಸ್ಟ್ ತಂತ್ರವನ್ನು ಈ ಪ್ರಬಂಧ ವಿವರಿಸುತ್ತದೆ. ಈ ಫ್ಯಾಸಿಸ್ಟ್ ತಂತ್ರವನ್ನು ವಾಲ್ಟರ್ ಬೆಂಜಮಿನ್ ‘aestheticizing of politics’ ಎಂದು ಕರೆಯುತ್ತಾನೆ.
ಮೊದಲ ಮಹಾಯುದ್ಧದ ಪರಿಣಾಮಗಳಿಂದ ಬಸವಳಿದಿದ್ದ ಯೂರೋಪಿನ ಅದರಲ್ಲೂ ಮುಖ್ಯವಾಗಿ ಇಟಲಿ ಮತ್ತು ಜರ್ಮನಿಯ ಶ್ರಮಿಕ ವರ್ಗ ರಾಜಕೀಯವಾಗಿ ಸಂಘಟಿತರಾಗುತ್ತಿತ್ತು. ಈ ಸಂಘಟನಾತ್ಮಕ ಒಲವುಗಳು ಸಹಜ ಹರಿವಿನಲ್ಲಿ ನಿಜ ಅರ್ಥದ ಪ್ರಜಾಪ್ರಭುತ್ವವನ್ನು ಖಾತರಿಪಡಿಸಿಕೊಳ್ಳುವ ಹಾದಿಯಲ್ಲಿ ಸಾಗಬೇಕಾಗಿತ್ತು. ಆದರೆ ಮುಸೋಲಿನಿ ಮತ್ತು ಹಿಟ್ಲರ್ ಇಬ್ಬರೂ ಭಾವನೆಗಳನ್ನು ಕೆರಳಿಸಿ ಸಂಘಟಿಸುವ ರಾಜಕಾರಣದ ಮೂಲಕ ಜನರನ್ನು ಹಾದಿ ತಪ್ಪಿಸಿದರು. ಪ್ರಜಾಸತ್ತಾತ್ಮಕವಾದ ರಾಜಕೀಯ ಪಾಲ್ಗೊಳ್ಳುವಿಕೆಯನ್ನು ನಿರೀಕ್ಷಿಸುತ್ತಿದ್ದ ಜನರಿಗೆ ರ್ಯಾಲಿಗಳು, ಸಮವಸ್ತ್ರಗಳು, ಘೋಷಣೆಗಳು ಮತ್ತು ಹಾಡುಗಳ ಮೂಲಕ ಹುಸಿ ಪಾಲ್ಗೊಳ್ಳುವಿಕೆಯ ಅವಕಾಶಗಳನ್ನು ಕಲ್ಪಿಸಿದರು. ಇದನ್ನು ವಾಲ್ಟರ್ ಬೆಂಜಮಿನ್ ‘expression replaces empowerment” ಎಂದು ಗುರುತಿಸುತ್ತಾನೆ.
ಎಂಬತ್ತರ ದಶಕದಿಂದೀಚೆಗೆ ಅವಿಭಜಿತ ದಕ್ಷಿಣ ಕನ್ನಡದಲ್ಲಿ ನಡೆದ ಬೆಳವಣಿಗೆಗಳೆಲ್ಲವೂ ಮೂವತ್ತರ ದಶಕದ ಇಟಲಿ ಮತ್ತು ಜರ್ಮನಿಯನ್ನು ಬೇರೊಂದು ಬಗೆಯಲ್ಲಿ ಪ್ರತಿಬಿಂಬಿಸುತ್ತವೆ. ಈ ಪ್ರದೇಶದಲ್ಲಿ ಕೃಷಿಯನ್ನು ಹೊರತುಪಡಿಸಿದರೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಒದಗಿಸಿದ್ದು ಮೀನುಗಾರಿಕೆ, ಹೆಂಚಿನ ಕಾರ್ಖಾನೆಗಳು, ಬೀಡಿ ಉದ್ಯಮ ಮತ್ತು ಗೋಡಂಬಿ ಸಂಸ್ಕರಣಾ ಉದ್ಯಮಗಳು. ಈ ನಾಲ್ಕೂ ಉದ್ಯಮಗಳು ಒತ್ತಡವನ್ನು ಅನುಭವಿಸಲು ತೊಡಗಿದ್ದೂ ಎಂಬತ್ತರ ದಶಕದಲ್ಲೇ.
ಕಾಂಕ್ರೀಟ್ ಸೂರಿನ ಜನಪ್ರಿಯತೆಯ ಜೊತೆಗೇ ಹಂಚಿನ ಬೇಡಿಕೆ ಕಡಿಮೆಯಾಗತೊಡಗಿತು. ಈ ಸವಾಲನ್ನು ಎದರಿಸಲು ಏನು ಮಾಡಬೇಕೆಂದು ಉದ್ಯಮಪತಿ ಆಲೋಚಿಸುತ್ತಿರುವಾಗಲೇ ಕುಸಿತ ನಾಟಕೀಯ ಪ್ರಮಾಣದಲ್ಲಿ ಏರಿತು. ಮುಂದಿನ ಎರಡು ದಶಕವಿಡೀ ಮುಚ್ಚುವ ಹೆಂಚಿನ ಕಾರ್ಖಾನೆಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಸುಮಾರು 80ರಷ್ಟಿದ್ದ ಹೆಂಚಿನ ಕಾರ್ಖಾನೆಗಳು 2010ರ ಹೊತ್ತಿಗೆ ಹತ್ತು ಹನ್ನೆರಡರ ಆಸುಪಾಸಿಗೆ ಇಳಿಯಿತು.
ಎಂಬತ್ತರ ದಶಕದಲ್ಲಿ ಸಾಕಷ್ಟು ಸುರಕ್ಷಿತವಾಗಿರುವಂತೆ ಕಾಣುತ್ತಿದ್ದ ಬೀಡಿ ಉದ್ಯಮ ತೊಂಬತ್ತರ ಆರಂಭದ ಹೊತ್ತಿಗೆ ಹಲಬಗೆಯ ಒತ್ತಡಗಳಿಂದ ಬಳಲುತ್ತಿತ್ತು. ಕಾರ್ಮಿಕರಿಗೆ ಕಾನೂನುಬದ್ಧ ಅನುಕೂಲಗಳನ್ನು ಒದಗಿಸುತ್ತಿದ್ದ ದೊಡ್ಡ ಕಂಪೆನಿಗಳಿಗೆ ಸವಾಲುವಾಗುವಂತೆ ಸಣ್ಣ ಸಣ್ಣ ಬೀಡಿ ಬ್ರಾಂಡ್ಗಳು ಹುಟ್ಟಿಕೊಂಡವು. ಇವು ಯಾವುದೇ ಕಾನೂನಿನ ಅಂಕೆಯಿಲ್ಲದೆ ಕಾರ್ಮಿಕರನ್ನು ಬಳಸಿಕೊಳ್ಳಲಾರಂಭಿಸಿದವು. ಆದರೆ ಇವುಗಳು ನೀಡುತ್ತಿದ್ದ ಸ್ಪರ್ಧೆ ದೊಡ್ಡ ಬ್ರಾಂಡ್ಗಳನ್ನು ಬಸವಳಿಯುವಂತೆ ಮಾಡಿತು. ಈ ನಡುವಣ ಸಣ್ಣ ಸಿಗರೇಟುಗಳೂ ಜನಪ್ರಿಯವಾದಾಗ ಬೀಡಿ ಉದ್ಯಮ ತೀವ್ರವಾಗಿ ಕುಸಿಯತೊಡಗಿತು.
1970 ಮತ್ತು 8೦ರ ದಶಕದಲ್ಲಿ ಭಾರತದ ಒಟ್ಟು ಗೋಡಂಬಿ ರಫ್ತಿನ ಮೂರನೇ ಒಂದು ಭಾಗದಷ್ಟನ್ನು ಕರ್ನಾಟಕದಲ್ಲಿದ್ದ, ಅದರಲ್ಲೂ ಮುಖ್ಯವಾಗಿ ಕರಾವಳಿಯಲ್ಲಿದ್ದ ಸಂಸ್ಕರಣಾ ಘಟಕಗಳು ಪೂರೈಸುತ್ತಿದ್ದವು. ಗೋಡಂಬಿಯನ್ನು ಕೈಯಲ್ಲೇ ಸುಲಿಯಬೇಕಾದ್ದರಿಂದ ದೊಡ್ಡ ಸಂಖ್ಯೆಯ ಉದ್ಯೋಗವನ್ನೂ ಈ ಕ್ಷೇತ್ರ ಒದಗಿಸಿತ್ತು. ಎಂಬತ್ತರ ದಶಕದ ಅಂತ್ಯದ ಹೊತ್ತಿಗೆ ವಿಯಟ್ನಾಂ ಮತ್ತು ಐವರಿಕೋಸ್ಟ್ಗಳೂ ಗೋಡಂಬಿ ರಫ್ತಿನಲ್ಲಿ ಭಾರತದೊಂದಿಗೆ ಸ್ಪರ್ಧೆಗಿಳಿದವು. ಅಲ್ಲಿ ಗೋಡಂಬಿ ಸುಲಿಯುವಿಕೆ ಯಾಂತ್ರೀಕರಣಗೊಂಡಿತ್ತು. ಭಾರತದ ಸಂಸ್ಕರಣಾ ಘಟಕಗಳು ಬೆಲೆಯಲ್ಲಿ ಸ್ಪರ್ಧಿಸಲಾರದೇ ಹೋದವು. ಈ ಹೊತ್ತಿಗಾಗಲೇ ಭಾರತದಲ್ಲಿ ಗೋಡಂಬಿ ಬೆಳೆಯ ಪ್ರಮಾಣವೂ ಕುಸಿಯುತೊಡಗಿತ್ತು. ಸಂಸ್ಕರಣಾ ಘಟಕಗಳು ಕಚ್ಚಾ ಗೋಡಂಬಿಗಾಗಿ ಆಮದನ್ನು ನೆಚ್ಚಿಕೊಳ್ಳಬೇಕಾಯಿತು. ಪರಿಣಾಮವಾಗಿ ಉದ್ಯಮ ತೀವ್ರ ಹಿನ್ನೆಡೆ ಅನುಭವಿಸಿತು.
ತೊಂಬತ್ತರ ದಶಕದ ಆರಂಭದಲ್ಲಿ ಜಾರಿಗೊಂಡ ಮುಕ್ತ ಆರ್ಥಿಕ ನೀತಿಯ ಭಾಗವಾಗಿ ಆಳ ಸಮುದ್ರ ಮೀನುಗಾರಿಕೆಗೆ ವಿದೇಶೀ ಟ್ರಾಲರ್ಗಳಿಗೆ ಅನುಮತಿ ದೊರೆಯಿತು. ಸಾಂಪ್ರಾದಾಯಿಕ ಮೀನುಗಾರಿಕೆ ನಡೆಸುತ್ತಿದ್ದವರು ಅಭದ್ರತೆಗೆ ಒಳಗಾದರೂ ಹೆಂಚು, ಬೀಡಿ ಮತ್ತು ಗೋಡಂಬಿ ಉದ್ಯಮದಂಥ ಹಿನ್ನಡೆಯನ್ನೇನೂ ಮೀನುಗಾರಿಕೆ ಎದುರಿಸಲಿಲ್ಲ.
ಎಂಬತ್ತರ ದಶಕದ ಅಂತ್ಯದ ವೇಳೆಗೆ ಕರ್ನಾಟಕದ ಕರಾವಳಿಯಲ್ಲಿ ಕೃಷಿಯೇತರ ಉದ್ಯೋಗಗಳನ್ನು ನೀಡುತ್ತಿದ್ದ ಉದ್ಯಮ ಕ್ಷೇತ್ರಗಳು ಕುಗ್ಗುವಿಕೆ ತೀವ್ರಗೊಂಡಾಗ ಅದರಿಂದ ಬಾಧಿತರಾದವರು ತಮ್ಮ ಬದುಕಿನ ಪ್ರಶ್ನೆಯನ್ನು ಮುಂದಿಟ್ಟುಕೊಂಡು ರಾಜಕೀಯವಾಗಿ ಸಂಘಟಿತರಾಗಬೇಕಿತ್ತು. ಆದರೆ ಈ ಹೊತ್ತಿಗಾಗಲೇ ತುರ್ತು ಪರಿಸ್ಥಿತಿಯ ದಿನಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದ ಸಂಘ ಪರಿವಾರ, ಕರಾವಳಿ ಕರ್ನಾಟಕದ ಪ್ರತೀ ಕ್ಷೇತ್ರದಲ್ಲೂ ಅತ್ಯಂತ ಜಾಣತನದ ‘ಸಾಂಸ್ಕೃತಿಕ ಮಧ್ಯಪ್ರವೇಶ’ ನಡೆಸುತ್ತಿತ್ತು. ‘ಹಿಂದೂ ಸಮಾಜೋತ್ಸವ’ ಎಂಬ ಪರಿಕಲ್ಪನೆ ಜನ್ಮತಳೆದದ್ದೇ ದಕ್ಷಿಣ ಕನ್ನಡದಲ್ಲಿ. ಇದನ್ನು ರೂಪಿಸಿದ್ದು ಆಗ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷರಾಗಿದ್ದ ಏರ್ಯ ಲಕ್ಷ್ಮೀನಾರಾಯಣ ಆಳ್ವ.3 ಮೊದಲ ಹಿಂದೂ ಸಮಾಜೋತ್ಸವ ನಡೆದದ್ದು 1981ರಲ್ಲಿ. ಇದೇ ವರ್ಷ ಧರ್ಮಸ್ಥಳದಲ್ಲಿ ವಿಶ್ವಹಿಂದೂ ಪರಿಷತ್ ಸಂಘಟಿಸಿದ್ದ ‘ವಿಶ್ವ ಹಿಂದೂ ಸಮ್ಮೇಳನ’ವೂ ನಡೆದಿತ್ತು.
ಇದೇ ಅವಧಿಯಲ್ಲಿ ಕರ್ನಾಟಕದ ಉಳಿದೆಲ್ಲೆಡೆ ದಲಿತ ಸಂಘರ್ಷ ಸಮಿತಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘಗಳು ಬಹಳ ಸಕ್ರಿಯವಾಗಿ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದವು. ತುರ್ತುಪರಿಸ್ಥಿತಿಯನ್ನು ಹಿಂತೆಗೆದುಕೊಂಡ ನಂತರ ನಡೆದ ಚುನಾವಣೆಯಲ್ಲೂ ಕಾಂಗ್ರೆಸ್ ಬೆಂಬಲಿಸಿದ್ದ ಕರ್ನಾಟಕದ ಮತದಾರರು ಕಾಂಗ್ರೆಸ್ ವಿರುದ್ಧ ಬಂಡೆದ್ದ ಕಾಲವದು. ಆಗ ಕಾಂಗ್ರೆಸ್ ಪರ್ಯಾಯವಾಗಿ ಜನತಾ ಪಕ್ಷವಿತ್ತು. 1983ರಲ್ಲಿ ಜನತಾ ಪಕ್ಷದ ನೇತೃತ್ವದಲ್ಲಿದ್ದ ಮೈತ್ರಿಕೂಟ ಜಯಗಳಿಸಿ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಕರ್ನಾಟಕದ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ರಚಿಸಿತು.
ಜನರ ಮನಸ್ಸಿನಲ್ಲಿದ್ದ ಕಾಂಗ್ರೆಸ್ ವಿರೋಧಿ ಮನಃಸ್ಥಿತಿಯನ್ನು ಬಳಸಿಕೊಂಡ ಸಂಘ ಪರಿವಾರ ತನ್ನ ಕೋಮುದ್ವೇಷದ ರಾಜಕಾರಣಕ್ಕೆ ಬೇಕಿರುವ ವಾತಾವರಣವನ್ನು ಸೃಷ್ಟಿಸುವ ಕೆಲಸವನ್ನು ಕರಾವಳಿಯಲ್ಲಿ ಆರಂಬಿಸಿತ್ತು. ‘ರಾಜಕೀಯೇತರ’ ಎಂದು ಹೇಳಿಕೊಳ್ಳುವ ‘ಸಾಂಸ್ಕೃತಿಕ’ ಸಂಘಟನೆಗಳು ಪುರಾಣ ಮತ್ತು ಇತಿಹಾಸಗಳಿಂದ ‘ಹಿಂದೂ ವೈಭವ’ದ ಕಥನಗಳನ್ನು ಹೆಕ್ಕಿ ತಂದು ಉಣಿಸಿ ಬಹುಸಂಖ್ಯಾತರನ್ನು ಭ್ರಮೆಗೆ ದೂಡುವ ಪ್ರಕ್ರಿಯೆ ಆರಂಭಿಸಿದ್ದವು. 1985ರಲ್ಲಿ ಉಡುಪಿಯಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಡೆದ ಎರಡನೇ ‘ಧರ್ಮಸಂಸದ್’ ಕೈಗೊಂಡ ನಿರ್ಣಯಗಳಲ್ಲಿ ಮುಖ್ಯವಾದುದು ರಾಮಜನ್ಮಭೂಮಿಗೆ ಸಂಬಂಧಿಸಿದ್ದಾಗಿತ್ತು. ‘ಶಿವರಾತ್ರಿಗೆ ಮುನ್ನ ಅಯೋಧ್ಯೆಯ ರಾಮಮಂದಿರ ಬೀಗ ತೆರೆಯದೇ ಇದ್ದರೆ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಾಗುವುದು’ ಎಂದು ಈ ನಿರ್ಣಯ ಹೇಳಿತ್ತು. ಕರಾವಳಿಯ ಸಾಮಾನ್ಯ ಜನರ ಬದುಕಿನ ಬವಣೆಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲೇ ‘ಹಿಂದೂ ಸಮಾಜೋತ್ಸವ’ಗಳೂ, ‘ರಾಮಶಿಲಾ ಪೂಜನ’ ಕಾರ್ಯಕ್ರಮಗಳೂ ವ್ಯಾಪಕವಾದವು. ಇವುಗಳು ಎಷ್ಟರ ಮಟ್ಟಿಗೆ ಜನರನ್ನು ವಶಪಡಿಸಿಕೊಂಡವೆಂದರೆ ಅನೇಕ ಕಾಂಗ್ರೆಸ್ ಮುಖಂಡರೂ ಇವುಗಳನ್ನು ಸಂಘಟಿಸಲು ಕೈಜೋಡಿಸುತ್ತಿದ್ದರು.
ಏರ್ಯ ಲಕ್ಷ್ಮೀನಾರಾಯಣ ಆಳ್ವರ ನೇತೃತ್ವದಲ್ಲಿ ನಡೆದ ಮೊದಲ ‘ಹಿಂದೂ ಸಮಾಜೋತ್ಸವದ’ ಸಂಘಟನಾ ಸಮಿತಿಯಲ್ಲಿದ್ದ ಸ್ಥಳೀಯ ಕಾಂಗ್ರೆಸ್ ಮುಖಂಡ ಸುರೇಶ್ ಅವರು ಪತ್ರಕರ್ತೆ ಗ್ರೀಷ್ಮಾ ಕುತ್ತಾರ್ಗೆ ವಿವರಿಸಿರುವುದು ಹೀಗೆ:. ‘ಇದೊಂದು ರಾಜಕೀಯೇತರ ಕಾರ್ಯಕ್ರಮ ಎಂದು ಆಳ್ವರು ಹೇಳಿದ್ದರು. ಆರ್ಎಸ್ಸೆಸ್ ಕಾರ್ಯಕರ್ತರು ನಮಗಿಂತ ಹೆಚ್ಚು ಜನರನ್ನು ಕರೆತಂದಬಿಡಬಹುದು, ಹಾಗಾಗಿ ನಮ್ಮ ಶಕ್ತಿಯನ್ನು ತೋರಿಸಬೇಕೆಂದು ನಾವೂ ನಮ್ಮ ಕಾರ್ಯಕರ್ತರನ್ನು ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಬರುವಂತೆ ಮಾಡಿದೆವು. ಸಮಾರಂಭದ ಸ್ಥಳಕ್ಕೆ ಬಂದಾಗ ವೇದಿಕೆಗೆ ಹಿನ್ನೆಲೆಯಾಗಿ ವಿಎಚ್ಪಿಯ ಹೆಸರು ದೊಡ್ಡದಾಗಿತ್ತು. ಆಗ ನಾವು ಮೋಸ ಹೋದವೆಂದು ತಿಳಿಯಿತು’. ಇದಾದ ನಂತರವೂ ಈ ಬಗೆಯ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಮುಖಂಡರ ಪ್ರತ್ಯಕ್ಷ ಮತ್ತು ಪರೋಕ್ಷ ಪಾಲ್ಗೊಳ್ಳುವಿಕೆಗಳೇನೂ ಕಡಿಮೆಯಾಗಲಿಲ್ಲ.
ಈ ಕಾರ್ಯಕ್ರಮಗಳು ನಡೆಯುತ್ತಿದ್ದ ಊರಿನ ತುಂಬೆಲ್ಲಾ ಕೇಸರಿ ಬಣ್ಣದ ಬ್ಯಾನರುಗಳು ಮತ್ತು ಬಂಟಿಂಗ್ಗಳು ತುಂಬಿರುತ್ತಿದ್ದವು. ವೇದಿಕೆಯ ಹಿನ್ನೆಲೆಯೂ ಕೇಸರಿಯೇ. ಭಾವುಕ ಭಾಷಣಗಳೆಲ್ಲವೂ ಹಿಂದೂ ವೈಭವವನ್ನು ಅತಿರಂಜಿತವಾಗಿ ಹೇಳುವಾಗಲೇ ಮುಸ್ಲಿಮರನ್ನೂ ಕೆಲ ಪ್ರಮಾಣದಲ್ಲಿ ಕ್ರೈಸ್ತರನ್ನು ಖಳನಾಯಕರನ್ನಾಗಿ ಚಿತ್ರಿಸುವ ಕೆಲಸವನ್ನು ಮಾಡುತ್ತಿದ್ದವು. ತಮ್ಮದೇ ಕಷ್ಟಗಳನ್ನು ಹಂಚಿಕೊಂಡು ತಮ್ಮದೇ ಜೊತೆಗೆ ಬದುಕುತ್ತಿದ್ದ ಈ ಸಮುದಾಯಗಳನ್ನು ಹಿಂದೂಗಳ ಎಲ್ಲಾ ಸಮಸ್ಯೆಗಳಿಗೂ ಕಾರಣರೆಂದು ಚಿತ್ರಿಸುವ ಕ್ರಿಯೆ ಇಲ್ಲಿ ನಡೆಯುತ್ತಿತ್ತು. ಬಜರಂಗದಳ, ವಿಶ್ವಹಿಂದೂ ಪರಿಷತ್ನಂಥ ಸಂಘಟನೆಗಳಿಂದ ತೊಡಗಿ ಬಿಜೆಪಿಯ ತನಕದ ತಳಮಟ್ಟದ ನಾಯಕತ್ವ ಬೆಳೆದದ್ದೂ ಇದೇ ಕಾಲಘಟ್ಟದಲ್ಲಿ. ಮೂವತ್ತರ ದಶಕದ ಯೂರೋಪಿನಲ್ಲಿ ಸಂಭವಿಸಿದ ಎಲ್ಲವೂ ಇಲ್ಲಿಯೂ ನಡೆಯಲಾರಂಭಿಸಿದವು. ಇಲ್ಲಿಯೂ ಭಾವುಕ ಭಾಷಣಗಳಿದ್ದವು, ಘೋಷಣೆಗಳಿದ್ದವು, ಬಾವುಟಗಳಿದ್ದವು, ಕೇಸರಿ ಪಂಚೆ ಮತ್ತು ಶಾಲಿನ ಸಮವಸ್ತ್ರವಿತ್ತು. ಹಾಗೆಯೇ ಇವೆಲ್ಲವನ್ನೂ ಒಂದು ವ್ಯವಸ್ಥಿತ ಪ್ರದರ್ಶನದಂತೆ ನಡೆಸಲಾಗುತ್ತಿತ್ತು. ವಾಲ್ಟರ್ ಬೆಂಜಮಿನ್ ಹೇಳಿದ ‘expression replaces empowerment’ ಇಲ್ಲಿ ನಿಜವಾಗುತ್ತಿತ್ತು.
ಎಂಬತ್ತರ ದಶಕದ ಮಧ್ಯಭಾಗದ ತನಕವೂ ದೊಡ್ಡ ದೇವಸ್ಥಾನಗಳ ಜಾತ್ರೆಗಳಲ್ಲಿಯೂ ಕಾಣಸಿಗದ ಕೇಸರಿ ಧ್ವಜ ಮತ್ತು ಬಂಟಿಂಗ್ಗಳು ಭೂತ/ದೈವಸ್ಥಾನಗಳಲ್ಲಿಯೂ ಸಾಮಾನ್ಯವಾಯಿತು. ಬಿಳಿಯ ಪಂಚೆಯುಟ್ಟೇ ನೇಮ ಮತ್ತು ಕೋಲಗಳಲ್ಲಿ ಭಾಗವಹಿಸುತ್ತಿದ್ದವರು ಕೇಸರಿ ಪಂಚೆ ಮತ್ತು ಕೇಸರಿ ಶಾಲುಗಳಿಗೆ ಒಗ್ಗಿಕೊಂಡರು. ‘ನೇಮೋತ್ಸವ’ದಂಥ ಹೊಸ ಪರಿಭಾಷೆಯೂ ಬಂತು. ಜಾನಪದೀಯ ಅವೈದಿಕ ಆಚರಣೆಗಳೆಲ್ಲವೂ ‘ಸಂಸ್ಕೃತೀಕರಣ’ಕ್ಕೆ ಒಳಗಾದವು. ವೈದಿಕ ಮತ್ತು ಜಾನಪದೀಯ ಪುರಾಣಗಳ ಕಥೆಗಳನ್ನೇ ನೆಚ್ಚಿಕೊಂಡಿದ್ದ ಯಕ್ಷಗಾನ ಮತ್ತು ತಾಳಮದ್ದಲೆಗಳು ಯಾವ ಪ್ರತಿರೋಧವನ್ನೂ ತೋರದೆ ರಾಜಕೀಯ ದೃಶ್ಯಚಮತ್ಕಾರದ ಭಾಗವಾದವು.
3
ಯಕ್ಷಗಾನದ ವೈಶಿಷ್ಟ್ಯ ಇರುವುದು ಅದನ್ನು ಪ್ರದರ್ಶಿಸುವ ಕಲಾವಿದರ ಅಶುಪ್ರತಿಭೆಯಲ್ಲಿ. ಅಭಿನಯಿಸಬೇಕಾದ ದೃಶ್ಯಕ್ಕೆ ಬೇಕಾದ ಚೌಕಟ್ಟನ್ನು ಒದಗಿಸುವುದು ಪ್ರಸಂಗದ ಪದ್ಯ. ಕುಣಿತ ಮತ್ತು ಮಾತಿನ ಆಯ್ಕೆಗಳೆಲ್ಲವೂ ‘ವೇಷಧಾರಿ’ಯದ್ದೇ. ನಾಟಕದಂತೆ ಮೊದಲೇ ನಿಗದಿಪಡಿಸಿದ ಸಂಭಾಷಣೆ ಇಲ್ಲಿಲ್ಲ. ಆಯಾ ಪ್ರದರ್ಶನದ ಸಂದರ್ಭದಲ್ಲಿ ಸಂಭಾಷಣೆಯನ್ನು ವೇಷಧಾರಿಯೇ ರಚಿಸಿಕೊಳ್ಳಬೇಕು. ಅಂದರೆ ವೇಷಧಾರಿ ಏಕಕಾಲದಲ್ಲಿ ವ್ಯಕ್ತಿಯಾಗಿಯೂ ಪಾತ್ರವಾಗಿಯೂ ಇರಲೇಬೇಕಾದ ಅನಿವಾರ್ಯವನ್ನು ಕಲಾ ಪ್ರಕಾರದ ಸ್ವರೂಪವೇ ನಿರ್ಧರಿಸಿಬಿಟ್ಟಿದೆ. ಆಹಾರ್ಯ ಮತ್ತು ನೃತ್ಯಗಳಿಲ್ಲದ ‘ತಾಳ ಮದ್ದಲೆ’ ಪ್ರಕಾರದಲ್ಲಂತೂ ಮಾತಿನದ್ದೇ ವಿಜೃಂಭಣೆ. ಅದರಿಂದಾಗಿಯೇ ಇಲ್ಲಿ ಪಾತ್ರಧಾರಿಯು ಅರ್ಥದಾರಿಯಾಗುವುದು. ಆಂಗಿಕ ಮತ್ತು ಆಹಾರ್ಯಗಳೆರಡರ ಬೆಂಬಲಗಳು ಅರ್ಥಧಾರಿಗೆ ಇಲ್ಲದೆ ಇರುವುದರಿಂದ ವಾಚಿಕದಲ್ಲೇ ಪಾತ್ರವನ್ನು ಪ್ರಸ್ತುತಪಡಿಸುವ ಸವಾಲು ಸಣ್ಣದಲ್ಲ. ಪಾತ್ರದೊಳಕ್ಕೆ ಸ್ವಂತ ಲೋಕದೃಷ್ಟಿಯ ಪ್ರವೇಶವೂ ಇಲ್ಲಿ ಹೆಚ್ಚು.
ಮೇಲ್ನೋಟಕ್ಕೆ ಇತರ ಎಲ್ಲಾ ಪ್ರದರ್ಶಕ ಕಲೆಗಳಿಗಿಂತ ಹೆಚ್ಚಿನ ಸ್ವಾತಂತ್ರ್ಯವನ್ನು ಯಕ್ಷಗಾನ ಕಲಾವಿದನಿಗೆ ಕೊಟ್ಟಿದೆ ಎಂಬಂತೆ ಕಾಣಿಸುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಈ ಪ್ರಕಾರ ತನ್ನ ಸ್ವರೂಪದಲ್ಲಿಯೇ ಬಹಳ ಬಿಗಿಯಾದ ಚೌಕಟ್ಟೊಂದನ್ನು ಹೊಂದಿರುವುದು ಕಾಣಿಸುತ್ತದೆ. ಇದರೊಳಕ್ಕೆ’ ಪೌರಾಣಿಕ’ವೆಂದು ಗುರುತಿಸಬಹುದಾದ ಕಥನ ಪರಿಸರದ ಹೊರಗಿನದ್ದನ್ನು ಅಳವಡಿಸಿಕೊಳ್ಳುವುದು ಬಹುತೇಕ ಅಸಾಧ್ಯ. ಎಚ್ಐವಿ/ಏಡ್ಸ್ನಂಥ ರೋಗದ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಅಮೃತ ಸೋಮೇಶ್ವರರಂಥ ವಿದ್ವಾಂಸರು ರಚಿಸಿದ ‘ಘೋರ ಮಾರಕ’ ಪ್ರಸಂಗದ ಕಥನವನ್ನು ಕಟ್ಟುವ ಕ್ರಮದಲ್ಲೂ ಪೌರಾಣಿಕತೆಯೇ ಇದೆ. ಜಾನಪದ ಕಥೆಗಳ ಅಳವಡಿಕೆಯ ಸಂದರ್ಭದಲ್ಲೂ ದೇವಲೋಕವು ಅನಿವಾರ್ಯವಾಗುವುದೂ ಇದೇ ಕಾರಣದಿಂದ ಅನ್ನಿಸುತ್ತದೆ.
ಇಂಥದ್ದೊಂದು ಬಿಗಿಯಾದ ಚೌಕಟ್ಟಿನೊಳಗೆ ಕಲಾವಿದನ ಲೋಕದೃಷ್ಟಿಯ ಮೂಲಕ ಪ್ರವೇಶವಾಗುವ ಸಮಕಾಲೀನತೆ ಸಮಸ್ಯಾತ್ಮಕವಾಗುವುದು ಸಹಜ. ಇದರ ಬಗ್ಗೆ ಸೇಡಿಯಾಪು ಕೃಷ್ಣಭಟ್ಟರ ಅಭಿಪ್ರಾಯವೊಂದು ಈ ಕೃತಿಯಲ್ಲಿ ಉಲ್ಲೇಖವಾಗಿದೆ. “ಪುರಾಣ ಕಾಲದ ರಾಜನೀತಿಜ್ಞರ ಬಾಯಿಂದ ಇಂದಿನ ರಾಜನೀತಿಯನ್ನು ಹೊರಪಡಿಸುವುದು ಉಚಿತವಲ್ಲ; ಇಂದಿನ ಸಮಾಜದ ಚಿತ್ರವನ್ನು ಅಂದಿನ ಗೋಡೆಗೆ ಅಂಟಿಸುವುದು ತರವಲ್ಲ. ಇಂತಹ ದೋಷಗಳು ಉಂಟಾಗುವುದಕ್ಕೆ ಮೂಲ ಕಾರಣವೆಂದರೆ, ಅಭಿನಯದ ಮರ್ಮವನ್ನು ತಿಳಿಯದಿರುವುದೇ. ನಿಜವಾಗಿ ನೋಡಿದರೆ ಅಭಿನೇತೃವು ಅನುಕಾರ್ಯದಲ್ಲಿ ಲೀನನಾಗಬೇಕು ಹೊರತು, ಅನುಕಾರ್ಯನನ್ನು ತನ್ನಲ್ಲಿ ಲೀನನಾಗಿ ಮಾಡಿಬಿಡಬಾರದು”. ಪಾತ್ರದೊಳಕ್ಕೆ ಎಷ್ಟರ ಮಟ್ಟಿಗೆ ಪಾತ್ರಧಾರಿಯ ಲೋಕದೃಷ್ಟಿ ಪ್ರವೇಶ ಪಡೆಯಬಹುದು ಎಂಬುದನ್ನು ಈ ಮಾತುಗಳು ಚೆನ್ನಾಗಿ ವಿವರಿಸುತ್ತವೆ. ಆದರೆ ಈಗಿನ ಸಮಸ್ಯೆ ಸೇಡಿಯಾಪು ಅವರು ಕಲ್ಪನೆಯಲ್ಲಿ ಇದ್ದುದಕ್ಕಿಂತ ಭಿನ್ನವಾದದ್ದು. ಈಗ ಪಾತ್ರದೊಳಕ್ಕೆ ಪ್ರವೇಶ ಪಡೆಯುತ್ತಿರುವುದು ಕೇವಲ ಲೋಕದೃಷ್ಟಿಯಲ್ಲ. ಇದನ್ನು ನಿತ್ಯಾನಂದ ಶೆಟ್ಟಿಯವರ ಮಾತುಗಳಲ್ಲೇ ಹೇಳುವುದಾದರೆ “...ನಿರ್ದಿಷ್ಟ ರಾಜಕೀಯ ಪಕ್ಷವೊಂದರ ಕಾರ್ಯಕರ್ತನಾಗಬೇಕಾದವನೊಬ್ಬ ಯಕ್ಷರಂಗವನ್ನು ಪ್ರವೇಶಿಸಿ ತಾನು ನಡೆಸಬೇಕೆಂದಿರುವ ಪಕ್ಷ ರಾಜಕಾರಣಕ್ಕೆ ಮತೀಯ ರಾಜಕಾರಣದ ವಿಷವನ್ನು ಬೆರೆಸುವ…” ಕ್ರಿಯೆ.
ಈ ಕ್ರಿಯೆಯನ್ನೂ ಯಕ್ಷಗಾನದ ಪರಂಪರೆಯೊಳಗಿನ ಅಂಶಗಳಿಂದಲೇ ರೂಪಿಸಿಕೊಳ್ಳಲಾಗಿದೆ. ‘ಜಾತಿಹಾಸ್ಯ’ ಎಂದು ಗುರುತಿಸಲಾಗುವ ಹಾಸ್ಯದ ಪ್ರಭೇದವೊಂದು ಯಕ್ಷಗಾನದಲ್ಲಿ ಬಹಳ ಹಿಂದಿನಿಂದಲೂ ಇತ್ತು. ಪ್ರಬಲ, ದುರ್ಬಲ, ಸಣ್ಣ ಮತ್ತು ದೊಡ್ಡ ಜಾತಿಗಳೆಲ್ಲವೂ ಹಾಸ್ಯಗಾರನ ಮೂಲಕ ಲೇವಡಿಗೆ ಒಳಗಾಗುವುದನ್ನು ಆರೋಗ್ಯಕರವಾಗಿ ಸ್ವೀಕರಿಸುವ ಮನೋಭಾವವೂ ಯಕ್ಷಗಾನವನ್ನು ಆಸ್ವಾದಿಸುವ ಸಮುದಾಯಗಳೆಲ್ಲವಕ್ಕೂ ಇತ್ತು. ಇದು ಅಂಕೆ ಮೀರಿದಾಗ ಅದಕ್ಕೆ ಕಡಿವಾಣ ಹಾಕುವ ಸಾಮಾಜಿಕ ಒತ್ತಡಗಳು ವಿವಿಧ ಜಾತಿ ಸಂಘಟನೆಗಳ ಮೂಲಕ ಆರಂಭವಾಯಿತು. ವರ್ತಮಾನದ ಯಕ್ಷಗಾನದಲ್ಲಿ ‘ಜಾತಿಹಾಸ್ಯ’ ಇಲ್ಲ ಎನ್ನವಷ್ಟು ಕಡಿಮೆ. ಆದರೆ ಆ ಸ್ಥಾನದಲ್ಲಿ ‘ಕೋಮುವಾದಿ ಹಾಸ್ಯ’ ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದೆ. ಕುತೂಹಲಕರ ಸಂಗತಿಯೆಂದರೆ ‘ಜಾತಿಹಾಸ್ಯ’ದ ವಿರುದ್ಧ ರೂಪುಗೊಂಡ ಸಾಮಾಜಿಕ ಒತ್ತಡ ‘ಕೋಮುವಾದಿ ಹಾಸ್ಯ’ದ ವಿರುದ್ಧ ರೂಪುಗೊಳ್ಳಲಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ವರ್ತಮಾನದ ಬಹುಸಂಖ್ಯಾತ ಕೋಮುರಾಜಕಾರಣ ಪಡೆದುಕೊಂಡಿರುವ ಉಗ್ರಸ್ವರೂಪದಿಂದ ಅಲ್ಪಸಂಖ್ಯಾತ ಸಮುದಾಯಗಳು ಭಯಭೀತರಾಗಿರುವುದು ಎಂಬ ಕಾರಣವೊಂದನ್ನು ನಿತ್ಯಾನಂದ ಶೆಟ್ಟಿ ನೀಡುತ್ತಾರೆ. ಈ ಕಾರಣವನ್ನು ಪೂರ್ಣವಾಗಿ ಬದಿಗಿರಿಸಲು ಸಾಧ್ಯವಿಲ್ಲ. ಆದರೆ ಮುಸ್ಲಿಮರು ಅಥವಾ ಕ್ರೈಸ್ತರಿಗೆ ಯಕ್ಷಗಾನದ ಜೊತೆಗಿರುವ ಸಂಬಂಧದ ಜೊತೆಗೆ ಇದನ್ನು ಗ್ರಹಿಸಿದರೆ ಸ್ವಲ್ಪ ಭಿನ್ನವಾದ ಚಿತ್ರಣ ದೊರೆಯುತ್ತದೆ.
‘ಜಾತಿಹಾಸ್ಯ’ದ ವಿರುದ್ಧ ಧ್ವನಿಯೆತ್ತಿದ ಎಲ್ಲಾ ಜಾತಿಗಳಿಗೂ ಯಕ್ಷಗಾನ ಕಲೆಯಲ್ಲೊಂದು ನೇರ ಪಾಲುದಾರಿಕೆ ಇತ್ತು. ಈ ಪಾಲುದಾರಿಕೆಯಲ್ಲಿ ಅಭಿನಯ, ಆಸ್ವಾದನೆ, ಆರಾಧನೆ ಮತ್ತು ಸಂಘಟನೆಗಳೆಲ್ಲವೂ ಸೇರಿದ್ದವು. ಆದರೆ ಯಕ್ಷಲೋಕ ಮುಸ್ಲಿಮರು ಮತ್ತು ಕ್ರೈಸ್ತರ ಮಟ್ಟಿಗೆ ಸದಾ ಅನ್ಯವೇ. ಬೆರಳೆಣಿಕೆಯ ಕಲಾವಿದರು, ಅದಕ್ಕಿಂತಲೂ ಕಡಿಮೆ ಸಂಖ್ಯೆಯ ಯಕ್ಷಗಾನ ಪೋಷಕರು ಮತ್ತು ಅಪರೂಪಕ್ಕೆ ಕಾಣಿಸುವ ಪ್ರೇಕ್ಷಕರಷ್ಟೇ ಈ ಎರಡೂ ಸಮುದಾಯಗಳಿಗೆ ಯಕ್ಷಗಾನದಲ್ಲಿರುವ ಪ್ರಾತಿನಿಧ್ಯ. ಇದಕ್ಕೆ ಹೊರತಾದುದು ಪ್ರದರ್ಶನದ ಸ್ಥಳದಲ್ಲಿ ತಾತ್ಕಾಲಿಕ ಅಂಗಡಿ ಮುಂಗಟ್ಟುಗಳನ್ನು ತೆರೆಯುವವರದ್ದು ಮಾತ್ರ. ಹಾಗಾಗಿ ಕರಾವಳಿಯ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ಮಟ್ಟಿಗೆ ಯಕ್ಷಗಾನದಲ್ಲಿ ಏನು ನಡೆಯುತ್ತಿದೆ ಎಂಬುದೇ ಅಪ್ರಸ್ತುತವಾಗಿತ್ತು ಎಂಬ ಅಂಶವನ್ನು ಇಲ್ಲಿ ಗಮನಿಸಲೇಬೇಕಾಗುತ್ತದೆ.
‘ಜಾತಿಹಾಸ್ಯ’ದಲ್ಲಿ ಬ್ರಾಹ್ಮಣರು ಲೇವಡಿಗೆ ಒಳಗಾಗುತ್ತಿದ್ದದ್ದು ತುಸು ಹೆಚ್ಚೇ ಎಂದು ಅನೇಕರು ಗುರುತಿಸಿದ್ದಾರೆ. ಆ ಹೊತ್ತಿಗಾಗಲೇ ಯಕ್ಷಗಾನದೊಳಕ್ಕೆ ದೊಡ್ಡ ಸಂಖ್ಯೆಯಲ್ಲಿ ಬ್ರಾಹ್ಮಣರೂ ಪ್ರವೇಶ ಪಡೆದದ್ದರಿಂದ ಈ ಲೇವಡಿಯ ವಿರುದ್ಧದ ಅಸಮಾಧಾನ ಕಲಾಪ್ರಕಾರದೊಳಗೆ ಇರುವವರಿಂದಲೂ ಅದನ್ನು ಆಸ್ವಾದಿಸಿ ವಿಮರ್ಶಿಸುವವರಿಂದಲೂ ಬಂತು. ತುರ್ತುಪರಿಸ್ಥಿತಿಯ ನಂತರದ ಕರ್ನಾಟಕವು ಒಂದರ್ಥದಲ್ಲಿ ಇತರ ಹಿಂದುಳಿದ ಜಾತಿಗಳೂ ತಮ್ಮ ಗುರುತನ್ನು ಗಟ್ಟಿಯಾಗಿ ಪ್ರತಿಪಾದಿಸಿದ ಕಾಲಘಟ್ಟವಾಗಿತ್ತು. ಸಹಜವಾಗಿಯೇ ಜಾತಿ ಹಾಸ್ಯದ ವಿರುದ್ಧ ಉಳಿದ ಜಾತಿ ಸಂಘಟನೆಗಳೂ ಗಟ್ಟಿಯಾಗಿಯೇ ಧ್ವನಿ ಎತ್ತಿದವು. ಈ ಬೆಳವಣಿಗೆಗಳು ನಡೆಯುತ್ತಿದ್ದ ಕಾಲದಲ್ಲೇ ಯಕ್ಷಗಾನದೊಳಕ್ಕೆ ಸಂಘ ಪರಿವಾರದ ‘ಸಾಂಸ್ಕೃತಿಕ ಮಧ್ಯಪ್ರವೇಶ’ವೂ ನಡೆಯಿತು. ಒಂದಾಗಿರುವ ‘ಹಿಂದು’ ಗುರುತನ್ನು ಪ್ರತಿಪಾದಿಸುವ ಸಂಘ ಪರಿವಾರಕ್ಕೆ ‘ಜಾತಿ ಹಾಸ್ಯ’ವನ್ನು ತೊಡೆಯುವುದರಲ್ಲಿ ಅನುಕೂಲವಿತ್ತು. ಅಷ್ಟು ಮಾತ್ರವಲ್ಲ, ಆ ಸ್ಥಾನಕ್ಕೆ ಬಂದ ‘ಕೋಮುವಾದಿ ಹಾಸ್ಯ’ ಸಂಘಪರಿವಾರದ ರಾಜಕೀಯ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸುತ್ತಿತ್ತು.
ಇದೊಂದು ಸರಳರೇಖಾತ್ಮಕ ಪ್ರಕ್ರಿಯೆಯಾಗಿರಲಿಲ್ಲ ಎಂಬ ಅಂಶವನ್ನೂ ನಾವು ಗಮನಿಸಬೇಕಾಗುತ್ತದೆ. ಕರ್ನಾಟಕದಲ್ಲಿ ಜಾರಿಗೆ ಬಂದ ಭೂಸುಧಾರಣಾ ಕಾಯ್ದೆ ಭೂಮಿಯಿಲ್ಲದ ಜಾತಿಗಳಿಗೆ ಭೂಮಿಯನ್ನೂ ಜೊತೆಗೆ ಆತ್ಮವಿಶ್ವಾಸವನ್ನೂ ಕೊಟ್ಟಿತ್ತು. ಕೆಳ ಜಾತಿಗಳು ತಮ್ಮ ಗುರುತನ್ನು ಬಲವಾಗಿ ಪ್ರತಿಪಾದಿಸುವುದರ ಹಿಂದೆ ಭೂಸುಧಾರಣೆಯೂ ಅದರ ಹಿಂದೆ ಇದ್ದ ದೇವರಾಜ ಅರಸರ ರಾಜಕೀಯ ನಿಲುವುಗಳೂ ಕೆಲಸ ಮಾಡಿದ್ದವು. ಈ ಸಂದರ್ಭದಲ್ಲಿ ಸಂಘ ಪರಿವಾರ ಮುಂದಿಟ್ಟ ‘ಹಿಂದೂ ಗುರುತು’ ಕೆಳಜಾತಿಗಳ ಮೇಲಿದ್ದ ಹಿಡಿತವನ್ನು ಕಳೆದುಕೊಳ್ಳುತ್ತಿದ್ದ ಉಚ್ಚಜಾತಿಗಳಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿಡಿತವನ್ನು ಉಳಿಸಿಕೊಳ್ಳುವ ಮಾರ್ಗವಾಗಿ ಕಂಡಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಹೆಚ್ಚು ಕಡಿಮೆ ಈ ಹೊತ್ತಿಗೆ ಯಕ್ಷಗಾನದ ‘ಸಂಸ್ಕೃತೀಕರಣ’ ಕ್ರಿಯೆಯೂ ಅದರ ಉಚ್ಛ್ರಾಯ ಸ್ಥಿತಿಯನ್ನು ತಲುಪಿತ್ತು.
4
ಶಿವರಾಮ ಕಾರಂತರು ಬರೆದ ‘ಯಕ್ಷಗಾನ’ ಪ್ರಕಟವಾದದ್ದು 1957ರಲ್ಲಿ. ಇದನ್ನು ಯಕ್ಷಗಾನದ ಕುರಿತ ಮೊದಲ ಪ್ರೌಢ ಬೌದ್ಧಿಕ ಚರ್ಚೆ ಎಂದು ಭಾವಿಸಿದರೆ ಈ ಬೌದ್ಧಿಕ ಚರ್ಚೆಯ ಪರಂಪರೆಗೆ ಏಳು ದಶಕಗಳ ಇತಿಹಾಸವಿದೆ. ಮಂಜೇಶ್ವರ ಗೋವಿಂದ ಪೈಗಳು ಸಂಗ್ರಹಿಸಿದ ಯಕ್ಷಗಾನ ಪ್ರಸಂಗಗಳ ಕಾಲಕ್ಕೆ ಹೋದರೆ ಈ ಪರಂಪರೆಯನ್ನೂ ಒಂದು ಶತಮಾನಕ್ಕೂ ವಿಸ್ತರಿಸಬಹುದು. ಆ ದೃಷ್ಟಿಯಲ್ಲಿ ನೋಡಿದರೆ ಯಕ್ಷಗಾನ ಕರ್ನಾಟಕದ ಇತರ ಯಾವುದೇ ಜಾನಪದ ಕಲೆಗಿಂತ ಹೆಚ್ಚಾಗಿ ವಿದ್ವಾಂಸರನ್ನು ಆಕರ್ಷಿಸಿದೆ ಎನ್ನಬಹುದು. ಕರಾವಳಿಯ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಯಕ್ಷಗಾನದ ಕುರಿತ ಬರೆಹಗಳಿಗೆ ಮೀಸಲಾದ ಸ್ಥಳ ಯಾವತ್ತೂ ಇತ್ತು ಮತ್ತು ಈಗಲೂ ಇದೆ. ಇಷ್ಟಾಗಿಯೂ ಕಳೆದ ಮೂರು ದಶಕಗಳ ಅವಧಿಯಲ್ಲಿ ಯಕ್ಷಗಾನದ ಕೋಮುವಾದೀಕರಣದ ಬಗ್ಗೆ ಎಷ್ಟು ಲೇಖನಗಳು ಬಂದಿವೆ ಎಂದು ಹುಡುಕಿದರೆ ನಿರಾಶೆಯಾಗುತ್ತದೆ. ಯಕ್ಷಗಾನದ ಬಗೆಗಿನ ಬರೆಹ ಅಂದರೆ ಯಕ್ಷಗಾನದ ವೇಷಭೂಷಣ, ಕುಣಿತ, ಭಾಗವತಿಕೆಗಳು ‘ಪರಂಪರೆ’ಗೆ ಬದ್ಧವಾಗಿವೆಯೋ ಇಲ್ಲವೋ ಎಂಬುದನ್ನು ಚರ್ಚಿಸುವುದು ಎಂಬಂತಾಗಿದೆ. ಇದಕ್ಕೆ ಅಪವಾದವೆಂಬಂತೆ ಕಾಣಿಸುವುದು ಕಲಾವಿದರ ಆತ್ಮಕತೆಗಳು ಮತ್ತು ಯಕ್ಷಗಾನದ ಕುರಿತ ಸಂಶೋಧನಾ ಕೃತಿಗಳು ಮಾತ್ರ. ಆದರೆ ಇವುಗಳಲ್ಲಿಯೂ ಯಕ್ಷಗಾನದೊಳಗಿನ ಜಾತಿ ವ್ಯವಸ್ಥೆಯ ಚರ್ಚೆಗಳನ್ನು ಕಾಣಬಹುದಾದರೂ ನಿರ್ದಿಷ್ಟ ಮತ-ಧರ್ಮಗಳನ್ನು ಹೀಗಳೆಯುವಂಥ ಮಾತುಗಾರಿಕೆಯಿದೆ ಎಂಬುದನ್ನು ಗುರುತಿಸಿ ಚರ್ಚಿಸುವುದಿಲ್ಲ.
ಇತ್ತೀಚೆಗೆ ‘ಯಕ್ಷ ರಂಗಾಯಣ’ ಸಂಸ್ಥೆ ನಡೆಸಿದ ಯಕ್ಷಗಾನದ ವರ್ತಮಾನದ ಬಗೆಗಿನ ಸಮಾಲೋಚನಾ ಸಭೆಯಲ್ಲಿ ವಿದ್ವಾಂಸರೊಬ್ಬರು, ಯಕ್ಷಗಾನದೊಳಗಿನ ಕೋಮುವಾದಿ ಒಲವುಗಳ ಬಗ್ಗೆಯೂ ಚರ್ಚಿಸಬೇಕೆಂಬ ಪ್ರಸ್ತಾಪವನ್ನು ಮುಂದಿಟ್ಟರು. ಇದಕ್ಕೆ ವಿರೋಧ ಬಂದದ್ದು ಪ್ರಖ್ಯಾತ ಅರ್ಥಧಾರಿಯಾಗಿ ಹೆಸರು ಮಾಡಿದ ಮತ್ತೊಬ್ಬರು ಯಕ್ಷಗಾನ ವಿದ್ವಾಂಸರಿಂದ. ಈ ಸಭೆಯ ಉದ್ದೇಶ ಆ ಚರ್ಚೆಯಲ್ಲ ಎಂಬುದು ಅವರ ವಾದವಾಗಿತ್ತು. ಈ ನಿಲುವಿನ ಬಗ್ಗೆ ಆಶ್ಚರ್ಯ ಪಡುವಂಥದ್ದೇನೂ ಇಲ್ಲ. ಕೋಮುವಾದಿ ರಾಜಕಾರಣ ಯಕ್ಷಗಾನದೊಳಕ್ಕೆ ಪ್ರವೇಶ ಪಡೆದು ಮೂರೂವರೆ ದಶಕ ಕಳೆದಿದ್ದರೂ ಅದನ್ನು ಬಹುತೇಕ ಯಕ್ಷಗಾನ ಕಲಾಮೀಮಾಂಸಕರು ಅದನ್ನೇಕೆ ಗಮನಿಸಲಿಲ್ಲ ಎಂಬುದನ್ನು ಅರ್ಥಧಾರಿ ವಿದ್ವಾಂಸರ ಮಾತೇ ಸ್ಪಷ್ಟಪಡಿಸುತ್ತಿದೆ. ಕಲೆಯ ಸುಂದರ ಹೊರಾವರಣವನ್ನಷ್ಟೇ ಕಂಡು ಅದು ಸ್ವಾಯತ್ತವೂ ಅದರಷ್ಟಕ್ಕೇ ಮೌಲ್ಯಯುತವಾದದ್ದು ಎಂದು ತೀರ್ಮಾನಿಸಿ, ಕಲಾಭಿವ್ಯಕ್ತಿಯ ಹಿಂದೆ ಕೆಲಸ ಮಾಡಿರುವ ಐತಿಹಾಸಿಕ ಮತ್ತು ಸಾಮಾಜಿಕ ವಿರೋಧಾಭಾಸಗಳನ್ನು ಮರೆತ ಸ್ಥಿತಿ ಇದು. ಜರ್ಮನಿಯ ಸಂಗೀತ ಮತ್ತು ಸಮಾಜಶಾಸ್ತ್ರಜ್ಞ ಥಿಯೋಡರ್ ಡಬ್ಲ್ಯು ಅಡೋರ್ನೋ ಇದನ್ನು “aesthetic fetishism”4 ಎಂದು ಕರೆಯುತ್ತಾನೆ. ಮೂರೂವರೆ ದಶಕದ ಅವಧಿಯಲ್ಲಿ ಈ fetishism ಅನ್ನು ಮೀರಿ ನಿಂತು ಯಕ್ಷಗಾನವನ್ನು ವಿಶ್ಲೇಷಿಸಿದ ಕಡಿಮೆ ಸಂಖ್ಯೆಯ ವಿದ್ವಾಂಸರ ಪಟ್ಟಿಗೆ ಈಗ ನಿತ್ಯಾನಂದ ಶೆಟ್ಟರೂ ಸೇರ್ಪಡೆಯಾಗಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸಬೇಕೋ ಅಥವಾ ಅವರು ಮುಂದೆ ಎದುರಿಸಬಹುದಾದ ನಿಂದನಾಸ್ತ್ರಗಳನ್ನು ನೆನಪಿಸಿಕೊಂಡು ಅನುಕಂಪ ವ್ಯಕ್ತಪಡಿಸಬೇಕೋ ತಿಳಿಯುತ್ತಿಲ್ಲ. ರಾಜಕೀಯವೆಂಬುದು ಸಂಪೂರ್ಣವಾಗಿ ದೃಶ್ಯ ಚಮತ್ಕಾರ ಮಾತ್ರವಾಗಿ ಬದಲಾಗಿರುವ ಈ ಹೊತ್ತಿನಲ್ಲಿ ಇಂಥದ್ದೊಂದು ವಿಮರ್ಶಾತ್ಮಕ ವಿಶ್ಲೇಷಣೆಯ ಅಗತ್ಯವಂತೂ ಇತ್ತು.
ಈ ಉತ್ಖನನ ಕ್ರಿಯೆಗೆ ನಿತ್ಯಾನಂದ ಶೆಟ್ಟರು ಪ್ರಾತಿನಿಧಿಕವಾಗಿ ಆರಿಸಿಕೊಂಡಿರುವ ಕಲಾವಿದ ದಿವಂಗತ ಕುಂಬಳೆ ಸುಂದರರಾವ್. ಪ್ರಾಸಬದ್ಧ ಮಾತುಗಳಿಗಾಗಿ ಅವರು ಪ್ರಸಿದ್ಧರಾದರು. ಆದರೆ ಅವರ ಪ್ರತಿಭೆ ಕೇವಲ ಅದಷ್ಟಕ್ಕೇ ಸೀಮಿತವಾಗಿರಲಿಲ್ಲ. ತಮ್ಮದೇ ಆದ ರೀತಿಯಲ್ಲಿ ಅನೇಕ ಪೌರಾಣಿಕ ಪಾತ್ರಗಳ ಅಂತರಂಗವನ್ನು ಶೋಧಿಸಿದ ವಿಶಿಷ್ಟ ಕಲಾವಿದರಿವರು. ‘ಭರತಾಗಮನ’ದ ಪ್ರಸಂಗದಲ್ಲಿ ಕುಂಬಳೆಯವರು ಕಟ್ಟಿಕೊಡುವ ಭರತನ ಪಾತ್ರ ಅನನ್ಯ. ವಸಿಷ್ಠರ ಓಲೆಯನ್ನೋದಿ ಕೇಕಯ ರಾಜ್ಯದಿಂದ ವಿಶ್ರಾಂತಿಯೇ ಇಲ್ಲದೆ ಪ್ರಯಾಣಿಸಿ ಅಯೋಧ್ಯೆಯನ್ನು ಪ್ರವೇಶಿಸಿದ ಭರತನನ್ನು ಇಡೀ ನಗರವೇ ‘ಅನ್ಯ’ನಾಗಿಸಿತ್ತು. ತನ್ನದೇ ದೇಶದಲ್ಲಿ ‘ಅನ್ಯ’ನಾಗುವ ಭರತನ ತಲ್ಲಣಗಳಷ್ಟೂ ಕುಂಬಳೆಯವರ ಅಸ್ಖಲಿತ ಮಾತುಗಳಲ್ಲಿ ಮೂರ್ತರೂಪ ಪಡೆಯುತ್ತಿತ್ತು. ಇಂತಹ ಕುಂಬಳೆಯವರು ರಾಜಕೀಯ ವೇದಿಕೆಗಳನ್ನೇರಿದ ತಕ್ಷಣ ತಮ್ಮದೇ ದೇಶದ ಜನಸಮುದಾಯವೊಂದನ್ನು ‘ಅನ್ಯ’ರನ್ನಾಗಿಸುವ ಮಾತುಗಳನ್ನೂ ಅಸ್ಖಲಿತವಾಗಿ ಆಡಿಬಿಡುತ್ತಿದ್ದರು. ಈ ವಿರೋಧಾಭಾಸದ ಹಿಂದೆ ಇದ್ದದ್ದೇನು?
ಕುಂಬಳೆಯವರು ಮತೀಯ ದ್ವೇಷವನ್ನು ಕೆದಕುವ ಬೆಂಕಿ ಭಾಷಣಗಳನ್ನು ಹೆಚ್ಚಿನ ಮಟ್ಟಿಗೆ ರಾಜಕೀಯ ವೇದಿಕೆಗೆ ಸೀಮಿತವಾಗಿಟ್ಟಿದ್ದರು. ಈ ಕೃತಿಯಲ್ಲಿ ಆನುಷಂಗಿಕವಾಗಿ ಪ್ರಸ್ತಾಪವಾಗಿರುವ ಇತರ ಉದಾಹರಣೆಗಳು ರಂಗಸ್ಥಳದ ಮೇಲೇ ಆಡಿದಂಥವು. ಇವುಗಳನ್ನು ಆಡಿದವರು ವೈಯಕ್ತಿಕ ಬದುಕಿನಲ್ಲಿ ಬಹಳ ಕ್ರೂರಿಗಳೇನೂ ಆಗಿರಬೇಕಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುವ ಸಾಧ್ಯತೆಯೇ ಹೆಚ್ಚು. ರಂಗದ ಮೇಲಿನಿಂದ ಆಡುವ ಮಾತಿಗೆ ರಂಗದ ಕೆಳಗಿನಿಂದ ಬರುವ ಚಪ್ಪಾಳೆಗಳು ಅವರ ಮಾತಿನ ತೀಕ್ಷ್ಣತೆಯನ್ನು ಹೆಚ್ಚಿಸುತ್ತಲೇ ಹೋಗುತ್ತವೆ. ಹೀಗೆ ಚಪ್ಪಾಳೆ ಹೊಡೆಯುವವರೂ ಸಾಮಾನ್ಯರೇ. ಫ್ಯಾಸಿಸಂ ಮಾಮೂಲಿನ ಸಂಗತಿಯಾಗಿಬಿಡುವುದೇ ಹೀಗೆ. ಸಾಂಸ್ಕೃತಿಕ ಬದುಕಿನಲ್ಲಿ ಕೇಡು ಮಾಮೂಲಿತನವಾದಾಗ ಸಾಯುವುದು ಮನುಷ್ಯರಷ್ಟೇ ಅಲ್ಲ. ಇಲ್ಲಿ ಚಿಂತನೆಯ ವಿವೇಕವೂ ಕೊನೆಯುಸಿರೆಳೆಯುತ್ತದೆ. ಈ ಕಾಲಘಟ್ಟದಲ್ಲಿ ಚಿಂತನೆಯ ವಿವೇಕವನ್ನು ಉಳಿಸಿಕೊಳ್ಳಲು ನಡೆಸಿರುವ ಪ್ರಯತ್ನಕ್ಕಾಗಿ ನಿತ್ಯಾನಂದ ಶೆಟ್ಟರನ್ನು ಅಭಿನಂದಿಸುತ್ತೇನೆ.
ಭದ್ರಂ ಶುಭಂ ಮಂಗಳಂ.
Edward Said, Representations of the Intellectual
Walter Benjamin, The Work of Art in the Age of Mechanical Reproduction, Section XIII, Trans. Harry Zohn, Illuminations (Schocken Books, 1969)
ಗ್ರೀಷ್ಮಾ ಕುತ್ತಾರ್, ಫಸ್ಟ್ ಪೋಸ್ಟ್ ಲೇಖನ ಸರಣಿ.
ಥಿಯೋಡರ್ ಡಬ್ಲ್ಯು ಅಡೋರ್ನೋ, On the Fetish Character in Music and the Regression of Listening, 1938 [PDF Link].
ಎನ್ ಎ ಎಂ ಇಸ್ಮಾಯಿಲ್
ಹಿರಿಯ ಪತ್ರಕರ್ತ ಎನ್. ಎ. ಎಂ. ಇಸ್ಮಾಯಿಲ್ ಅವರು ಮುದ್ರಣ, ದೃಶ್ಯ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಎರಡು ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಇವರು ‘ಉದಯವಾಣಿ’ಯಲ್ಲಿ ಮುಖ್ಯ ಉಪಸಂಪಾದಕರಾಗಿ ಹಾಗೂ ‘ಪ್ರಜಾವಾಣಿ’ಯಲ್ಲಿ ಸಹಾಯಕ ಸಂಪಾದಕರಾಗಿ (ಡಿಜಿಟಲ್ ವಿಭಾಗದ ಮುಖ್ಯಸ್ಥ) ಸೇವೆ ಸಲ್ಲಿಸಿದ್ದಾರೆ. ನಂತರ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ (ಕ್ರಿಯೇಟಿವ್) ಆಗಿ ಕಾರ್ಯನಿರ್ವಹಿಸಿದ ಇವರು, ಪ್ರಸ್ತುತ ಜಿಯೋಸ್ಟಾರ್ (ಸ್ಟಾರ್ ಇಂಡಿಯಾ) ಓಟಿಟಿ ವೇದಿಕೆಯಲ್ಲಿ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ತಂತ್ರಜ್ಞಾನದ ಸಾಮಾಜಿಕ ಪರಿಣಾಮಗಳು ಹಾಗೂ ಯಕ್ಷಗಾನ ಇವರ ಪ್ರಮುಖ ಆಸಕ್ತಿಯ ಕ್ಷೇತ್ರಗಳಾಗಿವೆ.
ಇದನ್ನೂ ಓದಿ …
“ಈ ಧೂಳಿನಿಂದಲೇ ಏಳಬೇಕು ನೆಲದೇವತೆಗಳ ನಾಡು ...”
ಇತ್ತೀಚೆಗೆ ಪ್ರಕಟವಾದ ಕೋಟಿಗಾನಹಳ್ಳಿ ರಾಮಯ್ಯನವರ ದರ್ಗಾಮಾಳದ ಚಿತ್ರಗಳು ಪುಸ್ತಕದ ಕುರಿತು ಸಂಕೇತ ಪಾಟೀಲ ಒಂದು ಟಿಪ್ಪಣಿ ಬರೆದಿದ್ದಾರೆ.





