ಸಂಗೀತದಂಥ ಕಲೆಯೊಳಗ ನಾನು non-existent ಆಗಿರಬೇಕು
ಪಂಡಿತ ರಾಜೀವ ತಾರಾನಾಥರ ಜೊತೆಗೊಂದು honest ಮಾತುಕತೆ
ಖ್ಯಾತ ಸರೋದ ವಾದಕ ಪಂಡಿತ ರಾಜೀವ ತಾರಾನಾಥರ ಜೊತೆ ತಮ್ಮ ಒಡನಾಟವನ್ನು ಶ್ರೀದೇವಿ ಕಳಸದ ನೆನೆಸಿಕೊಂಡಿದ್ದಾರೆ. ಅವರೊಂದಿಗೆ ನಡೆಸಿದ್ದ ಹಳೆಯ ಮಾತುಕತೆಯೊಂದು ಇಲ್ಲಿದೆ. ಅವರ ಎಂದಿನ ನೇರ ಮಾತುಗಳು, ಸ್ವಾರಸ್ಯಕರ ಉಪಮೆಗಳು, ಮುಕ್ತವಾದ ಮಾತುಗಳನ್ನು ನೀವಿಲ್ಲಿ ಕಾಣಬಹುದು.
ರಾಜೀವ ತಾರಾನಾಥರಿಗೆ ಕೊನರು ಬಳಗ ನಮನ ಸಲ್ಲಿಸುತ್ತದೆ.
2023ರ ಸಮಯ, ರಿಂಗಣಿಸಿದ ಫೋನ್.
“ನೀವು ನಾಳೆ ಹೊಂಟಬರ್ರಿ ಮೈಸೂರಿಗೆ”
“ಸರ್, ಹೇಳ್ರಿ ಏನು ವಿಷಯ.”
“ಹೆಂಗ್ರಿ ಸುಮ್ಮನಿರೂದು? ನನಗ ಸುಮ್ನಿರಲಿಕ್ಕೆ ಆಗವಾತು. ಏನರ ಮಾಡೂಣ ಬರ್ರಿ.”
“ಹೇಳ್ರಿ, ನಿಮ್ಮ ವಿಚಾರ ಏನು?”
“ನಮ್ಮ ದೇಶದ ಪರಿಸ್ಥಿತಿ ನೋಡ್ಲಿಕತ್ತೀರಿಲ್ಲೋ? ನಿಮ್ಮಂಥವರು ಬೇಕು. ಹೇಳ್ರಿ ಯಾವಾಗ ಬರ್ತೀರಿ? ಆ್ಯಕ್ಟಿವಿಸಂ ಮಾಡದ ಬ್ಯಾರೇ ಹಾದಿ ಇಲ್ಲ ಈಗ”
ತೊಂಬತ್ತೊಂದರ ವಯಸ್ಸಿನಲ್ಲಿಯೂ ರಾಜೀವ ಅವರು ಉಳಿಸಿಕೊಂಡಿದ್ದ ಸಾತ್ವಿಕ ಕೋಪ, ಅಗಾಧ ಸ್ಮರಣಶಕ್ತಿ, ವೈಚಾರಿಕ ಹಸಿವು, ಸಂಗೀತದ ಹಂಬಲ, ಅಂತಃಕರಣದ ಮುಂದೆ ಈ ಕ್ಷಣ ಎಲ್ಲವೂ ಗೌಣ ಎನ್ನಿಸುತ್ತಿದೆ. ಹಳೆಯ ನೆನಪುಗಳು ಒತ್ತಿ ಬರುತ್ತಿವೆ …
ಅವರೊಂದಿಗೆ ನನ್ನ ಒಡನಾಟ ಸುಮಾರು ಆರು ವರ್ಷದ್ದು. ಹಿಂದೊಮ್ಮೆ ಅವರನ್ನು ಮಾತಾಡಿಸೋಣವೆಂದು ಮೈಸೂರಿನ ಅವರ ಮನೆಗೆ ಹೋಗಿದ್ದೆ. ಅಂದಿನ ದಿನಾಂಕ 18.3.2018. ಅಂದು ನಡೆಸಿದ ಮಾತುಕತೆ ಇಲ್ಲಿದೆ.
ರಾಜೀವ ತಾರಾನಾಥ: ಇವ್ರಿಗೆ ವಿಷ ಕೊಡು.
(ಕೆಲಸದವಳು ನಗುತ್ತ ಚಹಾದೊಂದಿಗೆ ಬಂದಳು)
ರಾ.ತಾ: Yes, now you can shoot me.
ನಾನು: ಇಲ್ಲ ಸರ್ ನಾ ಹಾಗೆಲ್ಲ ತಯಾರಿಯೊಳಗೆ ಬರುವವಳಲ್ಲ.
ರಾ.ತಾ: Spontaneous? That's good...
ನಾನು: ಹೌದು. ಸುಮ್ಮನೆ ನಿಮ್ಮ ಮಾತು ಕೇಳಿಸಿಕೊಂಡು ಹೋಗಲು ಬಂದಿದ್ದು.
ರಾ.ತಾ: ಇಲ್ಲ ನಾ ಹಂಗೆಲ್ಲ ಮಾತಾಡೂದಿಲ್ಲ.
ನಾನು: ಸ್ವಲ್ಪ ಸರೋದ್ ನುಡಿಸಬಹುದಾ? (ಹೆದರಿಕೆ, ಸಂಕೋಚದಿಂದ ಕೇಳಿದೆ)
ರಾ.ತಾ: ಇಲ್ಲ ನಾ ಬಾರಸೂದಿಲ್ಲ.
ನಾನು: ಖಂಡಿತ ಬೇಡ ಸರ್.
ರಾ.ತಾ: ನೀವು ಪ್ರಶ್ನಾ ಕೇಳದ ನಾ ಮಾತಾಡೂದ್ರೊಳಗ ಅರ್ಥ ಇಲ್ಲ.
ನನಗೂ ಅವರು ಹಾಗೆ ಕೇಳುವುದೇ ಬೇಕಿತ್ತು. ಏಕೆಂದರೆ ನಮ್ಮ ಒಂದು ಶಬ್ದ, ವಾಕ್ಯ, ಮಾತುಗಳು ಪೂರ್ಣಗೊಳ್ಳುವ ಮೊದಲೇ ಸಟಕ್ಕನೆ ಅದರ ನೆತ್ತಿಯ ಮೇಲೆ ಕುಕ್ಕಿ ಇದು ಹೀಗಲ್ಲ ಹೀಗೇ ಎಂದು ಕರಾರುವಾಕ್ಕಾಗಿ ಹೇಳಿಬಿಡುವಂಥ ಸೂಕ್ಷ್ಮ ಮತ್ತು ತೀಕ್ಷ್ಣಮತಿ ಅವರು. ಮಾತನಾಡುತ್ತಿರುವಾಗ, ಕೋಪಗೊಂಡು ಎದ್ದೇಳು ಎಂದು ಹೇಳಿಬಿಡುತ್ತಾರೋ ಏನೋ ಎಂಬ ಅಳುಕಿನಿಂದಲೇ ಅವರ ಭೇಟಿಯನ್ನು ನಾನು ಮುಂದುಹಾಕಿದ್ದು ಬರೋಬ್ಬರಿ ಹದಿಮೂರು ವರ್ಷ! ಮೈಸೂರಿನ ಜವರೇಗೌಡ ಉದ್ಯಾನದ ಬಳಿ ಇರುವ ಅವರ ಮನೆಗೆ ಹೋಗಿದ್ದು ಸಂಜೆಯ ನಾಲ್ಕೂವರೆಗೆ. ಆರಂಭದಲ್ಲಿ ಎಷ್ಟೋ ಹೊತ್ತು ಇಂಗ್ಲೀಷಿನೊಳಗೇ ಮಾತನಾಡುತ್ತಿದ್ದ ರಾಜೀವರು, ಮಧ್ಯದಲ್ಲೊಮ್ಮೆ ನಿಂತು, “ಓಹ್, ನೀವ್ ಧಾರವಾಡದವ್ರ? ನಾ ರಾಯಚೂರಾಂವ್ರಿ, ಜವಾರಿ ಮಂದಿರೀಪಾ ನಾವ. ಇಷ್ಟೊತ್ತನಕಾ ಯಾಕ್ ಭಿಡೆ ಮಾಡ್ಕೊಂಡ್ರಿ ಮತ್ತ?” ಎಂದು ಹೇಳುತ್ತ ಕ್ಷಣ ಮಾತ್ರ ಪುಟ್ಟ ಮಗುವಿನಂತಾದರು. ಆದರೆ, ವಾಪಾಸು ಮತ್ತದೇ ಮಂದ್ರದ ಗಂಭೀರ, ಅದರೊಳಗೇ ತಿಳಿಹಾಸ್ಯ, ಖಡಕು ಅಭಿಪ್ರಾಯ, ಸಾತ್ವಿಕ ಕೋಪ, ಆಳದ ವಿಷಾದ, ಇನ್ನೂ ಏನೇನೋ… ಬರೋಬ್ಬರಿ ಎರಡೂವರೆತಾಸಿನ ಮಾತು-ಮಂಥನದ ‘ಕಛೇರಿ’ಯ ಸಾರ ಇಲ್ಲಿದೆ.
ಸಂಗೀತದೊಳಗ ಮೌನ ಅನ್ನೋದು ಅದ ಏನು, ಎಲ್ಲಿ ಅದ?
ನನ್ನ ಗುರು ಅಲಿ ಅಕ್ಬರ್ ಖಾನ್ ಸಾಹೇಬ್ರು ಹೇಳಿದ್ದನ್ನ ನಾ ನಿಮಗ ಹೇಳ್ತೀನಿ; ಕರೀಮ್ ಖಾನ್ ಸಾಹೇಬ್ರು, ಒಂದು ತಂಬೂರಿ ಶ್ರುತಿ ಮಾಡಲಿಕ್ಕೆ ಒಂದು ತಾಸು ತಗೊಳ್ತಿದ್ರು. ತಂತೀನಾ ತಿಕ್ಕಿ, ತೀಡಿ, ಶ್ರುತಿ ಮಾಡಿ, ಕೊನೀಗೆ ಅದರ ಜೀವಾಳ (ಝೀರ್) ಕೂಡಸ್ತಿದ್ರು. ಹಿಂಗ ಈ ಶ್ರುತಿ ಕೂಡೂತನಕ ಅಲ್ಲೊಂದು ‘ಸೀಕ್ರೇಟ್ ಸೈಲೆನ್ಸ್’ ಅನ್ನೋದು ಸೃಷ್ಟಿಯಾಗಿರ್ತಿತ್ತು. ಶ್ರುತಿ ಮಾಡಿದ್ದು ಸರೀ ಆಗೇದೋ ಇಲ್ಲೋ ಅಂತ ಮತ್ತ ಮತ್ತ ಕೇಳಿ, ಅದು ತೃಪ್ತಿ ಕೊಡೋತನಕ ಹೊಳ್ಳಿ ನೋಡ್ತಾನ ಇರ್ತಿರಲಿಲ್ಲಂತ. ಆದ್ರ ನಮಗೀವತ್ತು, ಎಲ್ಲ್ಯದ ಸೈಲೆನ್ಸ್? ಹತ್ತ ನಿಮಿಷದೊಳಗ ಎರಡೂ ತಂಬೂರಿ ಕೂಡಿಸಿಬಿಡ್ತೀವಿ. ಕೂಡಸೂವಾಗ ಯಾರರ ಬಂದ್ರ… ಹೇಯ್, ಹೆಲೋ, ಹಾಯ್ ಅಂತ ಲಕ್ಷ್ಯ ಕಳಕೊಂಡಬಿಡ್ತೇವಿ. ನಮಗ್ಯಾಕ ಇಲ್ಲ ಆ ‘ಸೀಕ್ರೇಟ್ ಸೈಲೆನ್ಸ್’?
ಇದು ಸಂಗೀತದೊಳಗಷ್ಟ ಅಂತಲ್ಲ. ಈಗ ನೋಡ್ರಿ, ಯಾರಾದ್ರೂ ನಮ್ಮನ್ನ ಭೆಟ್ಟಿ ಆದಕೂಡ್ಲೇ ಏನ್ರಿ ಹೆಂಗಿದ್ದೀರಿ? ಭಾಳ ದಿನಾ ಆತು ಅಂತ ಮಾತು ಚಾಲೂ ಮಾಡ್ತಿದ್ಹಂಗನ, ‘ಆಮೇಲೆ?’ ಅಂತ ಕೇಳಿಬಿಡ್ತೀವಿ. ಅಲ್ಲಿಗೆ ‘ಮುಗೀತು’ ಅನ್ನೋ ಸೂಚನಾ ಕೊಟ್ಹಂಗ. ನಮ್ಮ ಸ್ನೇಹ, ಸಂಬಂಧಗಳ ಗಂಭೀರತೆನೂ ಈವತ್ತ ಇಷ್ಟ. ಈಗ ನಮ್ಮನೀ ಮುಂದ ಒಂದು ಬೋರ್ಡ್ ಇತ್ತು ನೋಡಿದ್ರಿ, ಏನಿತ್ತು? ಸರೋದ್. ಅಲ್ಲಿ ನನ್ನ ಹೆಸರು ಕಂಡೂಕಾಣದಹಂಗ ಅದ. ಇದರರ್ಥ ನನಗಿಂತ ಸಂಗೀತ ದೊಡ್ಡದು, ನಾನು ಅನ್ನೋದು ಗೌಣ ಮತ್ತ ಮೌನ.
ನಿಮ್ಮದಾಗಿದ್ರ ತಿಕ್ಕೇ ತಿಕ್ಕತೀರಿ.
ರಿಯಾಝ್ ಅಂದ್ರ ತಿಕ್ಕದು, ಬರೀ ತಿಕ್ಕದು, ದೇವರ ತಂಬಿಗಿ ತಿಕ್ಕದು, ಅದು ತಾಮ್ರದ್ದೋ, ಹಿತ್ತಾಳೀದೋ ತಿಕ್ಕಿ ಚೊಕ್ಕ ಮಾಡಿ ಒಟ್ಟ ಹೊಳಸಬೇಕು. ನಿಮ್ಮದಾದ್ರ ತಿಕ್ಕಿತಿಕ್ಕಿ ಹೊಳಸ್ತೀರಿ. ಬ್ಯಾರೇವ್ರದ್ದಾದ್ರ ಇದ ಇಷ್ಟರೀ ಆತ್ರಿ ಅಂತ ಎದ್ದ ಹೊಂಟ್ಬಿಡ್ತೀರಿ. ಒಂದು ರಿಯಾಝಿನಿಂದ ಇನ್ನೊಂದ್ ರಿಯಾಝಿನೊಳಗೆ ಎಷ್ಟು ಏಕಾಗ್ರತೆ ಮತ್ತು ಸ್ಪಷ್ಟತೆ ಸಿಕ್ಕಿತು ಅನ್ನೋದು ನಿಮ್ಮ ಅನುಭವಕ್ಕ ಬರಬೇಕು. ಎಲ್ಲಿ ಏನು ಮಾಡಬೇಕು ಏನು ಮಾಡಬಾರದು ಅನ್ನೋ ತಿಳವಳಿಕೀನೂ ಇರಬೇಕು. ಈಗ ಎತ್ತು ನೋಡ್ರಿ, ನೀವು ಎಷ್ಟು ಹೊಡೀತೀರೋ ಅಷ್ಟು ಗಾಣ ಸುತ್ತತದ. ಇನ್ನ ಲಗ್ನ. ಹತ್ತು ಲಗ್ನ ಆದಮೇಲೆ ಹನ್ನೊಂದನೇ ಲಗ್ನದಲ್ಲಿ ಯಶಸ್ಸು ಸಾಧಿಸ್ತೀರಿ, ಯಾಕಂದ್ರ ಪ್ರ್ಯಾಕ್ಟೀಸ್ ಆಗಿರ್ತದ. ಇನ್ನ… ನಿಮ್ಮ ಮನಿಯೊಳಗ ಅವ್ವಗ ಬ್ಯಾಳಿಹುಳಿ ಮಾಡೂದ ಗೊತ್ತು. ನೂರಾರು ಸಲ ಮಾಡಿರ್ತಾಳಕಿ. ಯಾಕಂದ್ರ ಅಕಿ ಕೈ ನುರತಿರ್ತದ, ಮನಸ್ ನುರತಿರ್ತದ ಅದಕ್ಕಾಗೇ ಅಕಿಗೆ ಅದರ ನಿಖರತಾ ಗೊತ್ತಿರ್ತದ ಮತ್ತ ಹದಾನೂ. ಎಷ್ಟ ಬ್ಯಾಳಿ ಹಾಕಿದ್ರ ಎಷ್ಟ ಮಂದೀಗೆ ಆಗ್ತದ ಅನ್ನೂ ಲೆಕ್ಕಾಚಾರನೂ ಗೊತ್ತಿರ್ತದ. ಅದ ನೀವ್ ಮಾಡಿದ್ರ? ಹದ ಬರೂದಿಲ್ಲ. ಅಂದ್ರ ಮೊದ್ಲು ನಮ್ಮ intention clear ಆಗಿರಬೇಕು. ಅದು ಒಮ್ಮೆ ಕ್ಲಿಯರ್ ಆತಂದ್ರ ಮುಗೀತು. ಆ ಒಂದು ಮುದ್ದಿಯಿಂದ ಸುರು ಆಗಿ ಹದಾ ರೊಟ್ಟಿ ಆಗ್ತದ. ಇದೊಂದು ಪ್ರಾಸೆಸ್. ಇಂಥದ್ದು ಹಿಂಗ ಬರಬೇಕು ಅನ್ನೋ ಕಲ್ಪನಾ ಬಂತಂದ್ರ ಮುಗೀತು.
What we call the beginning is often the end And to make and end is to make a beginning. The end is where we start from. And every phrase And sentence that is right (where every word is at home, Taking its place to support the others, The word neither diffident nor ostentatious, An easy commerce of the old and the new, The common word exact without vulgarity, The formal word precise but not pedantic, The complete consort dancing together (An extract from T. S. Eliot's 'Little Gidding')
ಇದನ್ನ ನೀವು ಅಡುಗೇಗೂ ಲಗ್ನಕ್ಕೂ ಅನ್ವಯಿಸ್ಕೋಬಹುದು.
ಜಾಣರಾಗಿದ್ರ ಪೂರ್ತಿ ರೊಟ್ಟಿಗೆ ಬೆಣ್ಣಿ ಸವರ್ತೀರಿ.
ನಮ್ಮ ಹಿಂದೂಸ್ತಾನಿ ಸಂಗೀತದೊಳಗ ಸಾಧನಾ ಮಾಡೋದೇ ‘ಧ್ವನಿ ಸಂಸ್ಕಾರ’. ಪಾಶ್ಚಾತ್ಯ ಸಂಗೀತದೊಳಗ ಇದಕ್ಕ ಭಾಳಾ ಆದ್ಯತಾ ಕೊಡ್ತಾರ ಖರೇ. ಆದ್ರ ನಮ್ಮಲ್ಲಿ ಬ್ಯಾರೆಬ್ಯಾರೆ ಘರಾಣಾಗಳು ಇರೋದ್ರಿಂದ, ಅವರವರ ಪದ್ಧತಿಗಳಿಗೆ ತಕ್ಕಹಂಗ ನುಡಿಸೂದಕ್ಕ, ಹಾಡೂದಕ್ಕ ಸಾಧನಾ ನಡದಽ ಇರ್ತದ. ಅದಕ್ಕ ಒಂದು ಘರಾಣಾದಿಂದ ಇನ್ನೊಂದು ಘರಾಣಾ ಬ್ಯಾರೇನ. ನಮ್ಮ ಅಬ್ದುಲ್ ಕರೀಂ ಖಾನ್ ಸಾಹೇಬ್ರು ಒಂದ್ ತುದಿಯಾದ್ರ, ಫಯಾಝ್ ಖಾನ್ ಸಾಹೇಬ್ರು ಇನ್ನೊಂದು ತುದಿ. ಏನ ಆದ್ರೂ ಆಲಾಪನ್ನ ಬೆಳಸೂ ಕ್ರಮ ಒಂದ; ಅದು ಇಷ್ಟಂದ್ರ ಇಷ್ಟ, ತುದಿಮ್ಯಾಲಿನ ಬೆಣ್ಣಿಹಳಕು ಇದ್ದಹಂಗ. ಇಷ್ಟಽ ಬೆಣ್ಣೀನ್ನ ಇಡೀ ರೊಟ್ಟಿಗೆ ಸವರೋದು. ನೀವು ಆ ಸವರೂದ್ರೊಳಗ ಜಾಣರಾಗಿದ್ರ, ಇಡೀ ರೊಟ್ಟಿಗೆ ಸವರ್ತೀರಿ. ಇಲ್ಲಾಂದ್ರ ಅರ್ಧ ರೊಟ್ಟಿ ಒಣ ಒಣ ಉಳದಬಿಡ್ತದ. ಇಷ್ಟೇ ಇದು, ಆಲಾಪ ಅಂದ್ರ ಛಂದಂಗೆ ಹರಡೋದು.
ಹಿಂದೂಸ್ತಾನಿ ಸಂಗೀತದೊಳಗ ಬಹಳಷ್ಟು ಲಕ್ಷ್ಯ ಕೊಟ್ಟು ರಾಗವಿಸ್ತಾರ ಮಾಡಬೇಕಾಗ್ತದ. ಒಂದೊಂದ್ ಸ್ವರ, ಒಂದೊಂದ್ ತಿರುವುಗಳೊಳಗೂ ಹಿಂಡಿಹಿಂಡಿ ರಸಾ ತಗದು, ಅವುಗಳನ್ನ ಮಾಧುರ್ಯಗೊಳಿಸಿ ಪ್ರಸ್ತುತಪಡಿಸಬೇಕಾಗ್ತದ. ಈ ತರೀಖಾ ಒಬ್ಬ ಕಲಾವಿದರಿಂದ ಇನ್ನೊಬ್ಬ ಕಲಾವಿದರಿಗೆ ಬ್ಯಾರೇನ. ಇದು ಅವರವರ ಬುದ್ಧಿವಂತಿಕಿ ಮ್ಯಾಲ ಸಾಗ್ತದ. ಅದಕ್ಕ ಪ್ರಸ್ತುತಿಯಲ್ಲೂ ಭಿನ್ನವಾಗಿರ್ತದ.
ಯಾಕ ಬೇಕು ನಮಗ ಶಾಸ್ತ್ರೀಯ ಸಂಗೀತ?
ನಿಮಗ್ಯಾಕ ಬೇಕ ಅನ್ನಸ್ತದ ಮೊದಲ್ ಹೇಳ್ರಿ. (ಶಾಂತಿಗಾಗಿ, ಸಮಾಧಾನಕ್ಕಾಗಿ ಎಂದು ಸಣ್ಣ ತಮಾಷೆ ಮಾಡಿದೆ.) ಅಲ್ರಿ, ಛಂದನ್ನ ಹುಡುಗ ಅಥವಾ ಹುಡುಗಿ ನೋಡಿದ ಕೂಡ್ಲೇ ಹಾಂ! ಅವರು ನನಗ ಬೇಕು ಅನ್ನಸ್ತದಿಲ್ಲೋ? ಅಷ್ಟ. ಇಲ್ಲ ಇಲ್ಲ ಅಕಿ ನಮ್ಮ ಅಕ್ಕ, ನಮ್ಮ ಅಣ್ಣ ಇದ್ದಂಗ ಅಂತ ಹೇಳೋದೇನದಲಾ, ಅದು ಜಗತ್ತಿನೊಳಗಿನ ದೊಡ್ಡ ಸುಳ್ಳು! ನಮ್ಮ ಆಸೆಗಳನ್ನ ಹತ್ತಿಕ್ಕೊಂಡು ಇರೋದಕ್ಕೆ ನಮಗ ಹೆಂಗ್ ಆಗೂದಿಲ್ಲೋ ಹಂಗ ನಮ್ಮ ನೋವು, ಪ್ರೀತಿಯನ್ನೂ ಹತ್ತಿಕ್ಕೊಂಡು ಇರೂದಕ್ಕಾಗೂದಿಲ್ಲ. ಶಾಂತಿ, ಸಮಾಧಾನಕ್ಕ ಬೇಕಂದ್ರ ಬೆಂಗಳೂರಿಗೆ ಹೋಗ್ರಿ, ರವಿಶಂಕರ್ ಆಶ್ರಮಕ್ಕ, ಪಂಡಿತ್ ರವಿಶಂಕರ್ ಅಲ್ಲ ಮತ್ತ!
ಮುಟ್ಟಿದ ಗಳಿಗೆಯೊಳಗ ಯಾವುದೂ ಘರಾಣಾ ಆಗೂದಿಲ್ಲ.
ನಮ್ಮನಿ ಅಡಗಿ ನಿಮ್ಮನಿ ಅಡಗಿ ಅದೇ ಬದ್ನೀಕಾಯಿ. ಚೂರು ಬೇರೆ. ಕೆಟ್ಟದು ಒಳ್ಳೇದು ಅಂತ ತಮ್ಮತಮ್ಮದ ಹೇಳ್ತಾರ. ಆದ್ರ ಮೂರನೇಯವ್ರು ಆಗಿ ನಾವು ಹೇಳಲಿಕ್ಕೆ ಆಗೂದಿಲ್ಲ. ಆದ್ರ ಅದು ಅದ ಬದ್ನೀಕಾಯಿ. ನಾವು ಯಾವುದೋ ಒಂದರೊಳಗ ಬಂದಿರ್ತೇವಿ. ನಾ ಹೇಳೂದ್ರಾಗ ಅದು ಇದ್ದ ಇರ್ತದ. ನಿಮ್ಮ ಅವ್ವ ಬದ್ನೀಕಾಯಿ ಹಿಂಗ ಮಾಡ್ಕೋತ ಬಂದ್ಲು. ನಾಳೆ ನಿಮ್ಮನ್ನ ಕೇಳಿದ್ರ ಅಕಿ ರೀತಿ ಇದ್ದೇ ಇರ್ತದ. ಸಂಗೀತಕ್ಕೂ ಹಂಗ; ಮೂರು ತಲೆಮಾರುಗಳು ಅದನ್ನ ಮುಂದುವರಿಸಿಕೊಂಡು ಹೋದ್ರ ಅದಕ್ಕೊಂದು ಕ್ಷಮತಾ ಬರ್ತದ. ಆಗ ಅದೊಂದು ಘರಾಣಾ ಆಗ್ತದ ಅಂತೆಲ್ಲಾ ಮಂದಿ ಹೇಳ್ತಾರ ಖರೇ. ಇದು ವಾಕ್ಯದೊಳಗ ಅಡ್ಡೀಯಿಲ್ಲ. ಆದ್ರ ಇದಕ್ಕೆಲ್ಲ ಅರ್ಥ ಇಲ್ಲ. ಮುಟ್ಟಿದ ಗಳಿಗೆಯೊಳಗ ಯಾವುದೂ ಘರಾಣಾ ಆಗೂದಿಲ್ಲ. ಸ್ವಲ್ಪ ನಾವಿರಬೇಕು. ಎರಡು ಮೂರು ತಲೆಮಾರುಗಳೂ ಇರಬೇಕು.
ನಮ್ಮ ಹಿಂದೂಸ್ತಾನಿ ಸಂಗೀತ ಕೃಷಿಯೊಳಗ ಸ್ವಲ್ಪ ವಿಚಾರ ಮಾಡಿದ್ರ, ಇದ್ದಿದ್ದು ಖಾನ್ ಸಾಹೇಬರ ಮಕ್ಕಳು ಮತ್ತವರ ಮೊಮ್ಮಕ್ಕಳು ಅನ್ನೋದನ್ನ ನಾವು ಮರೀಬಾರದು. ಯಾಕಂದ್ರ ಅದು ಸತ್ಯ. ಆದ್ರ, ಈಗಿನ ದೊಡ್ಡಮಂದಿ ಬ್ಯಾರೇನ ಮಾತಾಡ್ತಾರು. ಕಿರಾಣಾ ಘರಾಣಾನ್ನ ನಮ್ಮ ಕನ್ನಡಮ್ಮನ ಬೆಳಸಿದ್ಲು. ಅದು ಇಲ್ಲೇ ಹೆಚ್ಚು ಬೆಳದಿದ್ದು. ಮೂಲಪುರುಷನನ್ನ ನಮ್ಮ ಕನ್ನಡಮ್ಮ ಬೆಳೆಸಿದ್ಲು. ನಾವೀಗ ಆ ಹೆಸರು ಹೇಳೂದಿಲ್ಲ. ಹೇಳಿದ್ರ ಅದು ಬ್ಯಾರೇನ ಕೇಳಸ್ತದ.
ನಮ್ಮ ದೇಶದೊಳಗ ಗಂಭೀರವಾದಂಥದ್ದು ಏನ್ ನಡೀಲೀಕ್ಹತ್ತದ?
ನಾವು self-destructive. ಯಾವುದರಲ್ಲೂ ಎದಕ್ಕೂ ಇಲ್ಲ ನಾವು. ಎರಡೇ ಎರಡರೊಳಗ ಭಾಳ ಭೇಷ್ ಇದ್ದೇವಿ; ಒಂದು ಸಂಗೀತ ಇನ್ನೊಂದು ಅಡಗಿ. ಇವ ಎರಡು ಬಿಟ್ರ ಉಳಕೀ ಎಲ್ಲಾ ಬಾದ್. ಬೇರೆ ಏನರ ಇದ್ರ ಹೇಳ್ರಿ ನೋಡೂಣು? ನಮ್ ಯೋಗ ಅದ ಅಂತ ಮೂಗ ಹಿಡೀಬ್ಯಾಡ್ರಿ ಮತ್. ಮೂಗ ಹಿಡೀರಿ, ಬಿಡ್ರಿ ಉಸರ ಒಳಗ ಹೊರಗ ತನ್ ತಾನ ಆಗ್ತನ ಇರ್ತದ. ಅದಕ್ಕ ನಮ್ಮ ಸಂಗೀತ ಮತ್ತ ಅಡಗಿ ಎರಡ ಭೇಷ್. ಈ ಎರಡರ ಸಲವಾಗೇ ಇಡೀ ದುನಿಯಾ ನಮ್ಮನ್ನ ನೋಡ್ಲಿಕ್ಹತ್ತದ. ಬೇಂದ್ರೆ, ಅನಂತಮೂರ್ತಿನ್ನ ಅದು ಓದೂದಿಲ್ಲ. ತಾರಾನಾಥನ್ನ ಬೇಡ್ತಾರ, ಅಮ್ಝದನ್ನ ಕೇಳ್ತಾರ. ಈವತ್ತ ಶಾರ್ಟ್ ಕಟ್ ಏನದಲಾ ಅದು ಎಲ್ಲಾ ದುಡ್ಡಿನಿಂದ ಬರ್ತಿರೋದು. ಯಾಕ ಓದಬೇಕು, ರೊಕ್ಕಾ ಕೊಟ್ರ ಪಿಎಚ್ಡಿ ಕೊಡ್ತಾರ ಅಂದಮ್ಯಾಲ? ಎಂಜಿನಿಯರಿಂಗ್ ಸೀಟ್ ಸಿಗಲಿಲ್ಲ? ತುಗೋ ಇಂಗ್ಲಿಷ್ ಲಿಟರೇಚರ್. ಸಾಹಿತ್ಯಕ್ಕೊಂದು ಶಿಸ್ತು ಅದ ಗಂಭೀರತೆ ಅದ ಅದು ಕಲಿಸೋವ್ರಿಗೂ ಗೊತ್ತಿಲ್ಲ ಕಲಿಯೂವವರಿಗೂ ಗೊತ್ತಿಲ್ಲ. ಸಂಬಳಕ್ಕಾಗಿ ಕೆಲಸ ಅಷ್ಟ. ಎಂ ಎ ಗೆ ಎರಡು ಲಕ್ಷ, ಪಿಎಚ್ಡಿ ಗೆ ನಾಲ್ಕು ಲಕ್ಷ. ಸುಮ್ನ ತುಗೋ-ಕೊಡು.
ಇನ್ನ ಮಾತಾಡಿದ್ರ ಶೂಟ್! ಆತಲ್ಲಾ ಮೊನ್ನೆ ಗೌರಿ ಶೂಟ್. ಹೇಳ್ರಿ, ನಮ್ಮ ದೇಶದೊಳಗ ಗಂಭೀರವಾದಂಥದ್ದು ಏನ್ ನಡೀಲೀಕ್ಹತ್ತದ? ಬರೀ ಕೊಲೆ ಅತ್ಯಾಚಾರ. ಜೈಶ್ರೀರಾಮ್ ಅಂತ ಹೇಳ್ತಾನ ಎಷ್ಟು ವಿಧದೊಳಗ ಹೆಣ್ಣುಮಗಳನ್ನ ಅತ್ಯಾಚಾರ ಮಾಡಬಹುದು ಅಂತಾನೂ ಹೇಳ್ತಾರ. ಸುಟ್ಟು ಹಾಕ್ತಾರ, ಗ್ಯಾಂಗ್ ರೇಪ್ ಮಾಡ್ತಾರ ಮತ್ತ ಭಾರತ್ ಮಾತಾ ಕೀ ಜೈನೂ ಅಂತಾರ… ನಮ್ಮ ದೇಶ ಹೆಣ್ಣುಮಕ್ಕಳ ವಿಚಾರದೊಳಗ ಬದಲಾಗೂದೇ ಇಲ್ಲ. Bullshit! You must have a sense of shame. ನಮ್ಮ ಸಂಸ್ಕೃತದಲ್ಲಿ ಒಂದೊಳ್ಳೆ ಪದ ಅದ. ‘ಪಶ್ಚಾತ್ ತಾಪ’. ಈ ಪಶ್ಚಾತ್ ತಾಪ ಅಥವಾ ಕ್ಷಮೆ. ಆದ್ರ ಇದೆಲ್ಲ ನಮಗೆ ಗೊತ್ತೇ ಇಲ್ಲ!
ಲಾಬಿ ಮಾಡ್ಕೋತಿದ್ರಷ್ಟ ಸಾಹಿತ್ಯ. ಆದ್ರ ಸಂಗೀತ ಹಂಗಲ್ಲ…
ಇಲ್ಲ ಎರಡೂ ಬೇರೆ ಬೇರೆ! ಪ್ರಾಮಾಣಿಕ ಅನ್ನೋ ಶಬ್ದಾನ ಸಾಹಿತಿಗಳ ಭಾಳ ಬಳಸ್ತಾರು. ಅವರು ಬರೆಯೋದೆಲ್ಲಾ ಪ್ರಾಮಾಣಿಕ ಅನ್ನೋದು ಸುಳ್ಳು. ನಾನು ಸಂಗೀತ ಮತ್ತು ಸಾಹಿತ್ಯ ಎರಡರೊಳಗೂ ಇದ್ದಂವ. ಆದ್ರ, ನನಗದು ಯಾವಾಗ ಕೆಸರು ಅನ್ನಿಸ್ತೋ ಆಗ ಹೊರಗಬಂದಬಿಟ್ಟೆ. ಸಾಹಿತ್ಯದಲ್ಲಿ ಸುಳ್ಳು ಬೇಕು, ಲಾಬಿ ಮಾಡ್ಕೊಂಡ ಇರಬೇಕು. ಆದ್ರ ಸಂಗೀತ ಹಂಗಲ್ಲ, Music is a test of honesty. ಹತ್ತು ತಾಸು ರಿಯಾಝ್ ಮಾಡಬೇಕು. ಲಾಜಮೀ... ಇದ ನೋಡ್ರಿ ನಮ್ ಗುಡಿ. ಇಲ್ಲೇ ತಿಕ್ಕೂದು, ದುಡಿಯೂದು ರಿಯಾಝ್ ಅಂದ್ರ. ನಾ ಯಾವತ್ ರಿಯಾಝ್ ಮಾಡೂದಿಲ್ಲೋ ಅವತ್ ಕೈ ಬಿದ್ದ ಹೋದಂಗ. ಸೂಳೆಮಗನ ಕುಂಡರ್ ಇಲ್ಲೇ ಅಂತ ಕುಂಡರಸ್ತದ ಇದು. ಐದೂವರೀಗೆ ಏಳ್ತೇನಿ ತಿಕ್ಕೊಂತ ಕುಂಡರ್ತೇನಿ. (ರಿಯಾಝಿನ ಕೋಣೆ ಕಡೆ ಕೈ ಮಾಡಿದರು.)
ಈವತ್ತ ರೊಕ್ಕ ಕೊಟ್ರ ಡಿಗ್ರಿ, ಪಿಎಚ್ಡಿ ಬರ್ತಾವು. ಆದ್ರ ಸಂಗೀತ ಹಂಗಲ್ಲ. ಕಲಿಯುವವರು ಮತ್ತು ಕಲಿಸುವವರು ಅಷ್ಟ ಖರೇ. ಇದು ಪರ್ಫಾರ್ಮಿಂಗ್ ಆರ್ಟ್. ಈ ನಮ್ಮ ಅನುಪಮ ಜೋಶಿ ಇದ್ದಾನಲ್ಲ (ಪುಣೆ ಮೂಲದ ಶಿಷ್ಯ) ಜಪಾನಿ ಭಾಷಾ ಒಳಗ ಭಾರೀ ಶಾಣ್ಯಾ. ಮೊದಲ್ಗೆ ನನ್ನ ಕಡೆ ಬಂದಾಗ, Why do you fancy to the sarod? ಅಂತ ಕೇಳಿದ್ದ. I fancy your wife ಅಂದು, ಸಮಾ ಝಾಡಿಸಿ ಅವರಪ್ಪ ಯಾರು ಅಮ್ಮ ಯಾರು ಅನ್ನೋದನ್ನ ಮರೆಸಿಬಿಟ್ಟಿದ್ದೆ. ಆಮ್ಯಾಲ ಪಾಪ ಅನ್ನಿಸ್ತು, ಯಾಕರ ಬೈದ್ನೇನೋ ಅಂತ. ಆಮ್ಯಾಲ ಈ ಹೆಣ್ಣು, ಲಗ್ನ, ವರದಕ್ಷಿಣಿ, ಕಂಪ್ಯೂಟರು ಯಾವುದೂ ನನಗ ಬ್ಯಾಡಾ ಸರೋದ್ ಬಾರಿಸ್ಕೋತ ಕೂಡ್ತೇನಿ ಅಂದ್ಬಿಟ್ಟ. ಅವ ಏನ್ ಬ್ಯಾಡಾ ಅಂದ್ನಲ್ಲಾ, ಅವೆಲ್ಲಾ ಒಂಥರಾ ಜಿಲೇಬಿ ಇದ್ಹಂಗ್ರೀ. ಆದ್ರ ತಿಕ್ಕಿದ್ದನ್ನ ಸಾವಿರಾ, ಹತ್ಸಾವಿರ ಸಲಾ ತಿಕ್ಕತೇನಿ ಅನ್ಲಿಕ್ಕೆ ಎದಿ ಗಟ್ಟಿ ಇರಬೇಕು. ಅದ ಈ ಮಗ್ಗ ಅದ. ಎಲ್ಲಾ ಬಿಟ್ ಮಾಡೂದಕ್ಕ ತಪಸ್ಸು ಅಂತ ನಮ್ಮ ಪೂರ್ವಜರೂ ಹೇಳ್ಯಾರಿಲ್ಲೋ? ಆದ್ರ ನಾವು ಈವತ್ ನಮ್ಮ ಮಕ್ಕಳಿಗೆ, ಹೋಗು ಪುಟ್ಟಾ ಹೋಂವರ್ಕ್ ಮಾಡ್ಹೋಗು ಅಂತೇವಿ. ಅವಕ್ಕೂ ಬೇಡ ನಮಗೂ ಬೇಡ ಉಳಿದದ್ದು.
ಯಾವುದೋ ಒಂದ್ ಹುಚ್ ಹಿಡಿಸ್ಕೊಂಡ್ ಕೂತವ್ರಿಗೆ ಈ ಮಂದಿ ಅಂತಾರ, ಅಯ್ ಇವ ಕುಡೀತಾನ್ರಿ, ಸೂಳೆಕೆರಿಗೆ ಹೋಗ್ತಾನ್ರಿ ಅಂತ. ಅವ್ರಿಗೆ ಸೀದಾ ಕೇಳ್ತೇನಿ ನಾ, ರಿಯಾಝ್ ಮಾಡ್ತಾನಿಲ್ಲೋ? ಅಂತ. ನೀ ತುಳಸೀ ನೀರ್ ಕುಡೀತಿ ಹೆಂಡತಿ ಬಾಜೂ ಹೋಗಿ ಮಲ್ಕೋತಿ. ಅಯ್ಯೋ ನಮ್ ವೈಫ್ ಕಾಯ್ತಿರ್ತಾರ ಏಟೋಕ್ಲಾಕ್ ಆಯ್ತು ಮನೀಗೆ ಹೋಗಬೇಕು ಅಂತ ಓಡ್ತಿ? Laziest and easiest thing is to be good.
ಸಂಗೀತ-ಸಾಹಿತ್ಯ ಎರಡರೊಳಗೂ ನಾ ಕಾಲಿಟ್ಟೆ. ಆದ್ರ ನಮ್ಮ ದೇವರು ನನಗ ಸರೋದ್ನೊಳಗ ಸಿಕ್ರು (ಅಲಿ ಅಕ್ಬರ್ ಖಾನ್ ಸಾಹೇಬರ ಫೋಟೋಗೆ ಕೈತೋರಿ) ನಾ ಅಲ್ಲೇ ಉಳದಬಿಟ್ಟೆ. ನಾವೆಲ್ಲಾ ಹಿಂಗ, ಕಹಿ ಹತ್ತೂತನ ಹಾಗಲಕಾಯಿ ತಿನ್ಕೋತನ ಇರ್ತೇವಿ. ಒಟ್ಟಿನ್ಯಾಗ ನಾನು ನನ್ನ ಸರೋದ್ ಜೋಡಿ ಅರಾಮಿದ್ದೇನ್ರಿಪಾ. ಎಂಥಾ ಅಸೌಖ್ಯ ಇದ್ರೂ ಜೋಳದ ಭಾಕ್ರಿ, ಬದ್ನೀಕಾಯಿ ಪಲ್ಯಾ ತಿನ್ನೂದ ಬಿಡ್ತೇನಿ ನಾಲಗಿ ಕೆಟ್ಟದ ಅಂತ. ಆದ್ರ ನಸೀಕ್ಲೇ ಐದೂವರಿನ್ಯಾಗಿನ ರಿಯಾಝ್ ಬಿಡೂದಿಲ್ಲ. ಆಮೇಲೆ ಈ ರಿಯಾಝ್ ಅನ್ನೋದು all about failure, ಪ್ರದರ್ಶನ ಅನ್ನೋದು all about success. ಮತ್ತ ಯಾವಾಗಲೂ ರಿಯಾಝ್ ಅನ್ನೋದು ನನ್ನ ವೈಯಕ್ತಿಕ!
ಈ ನಾನು ನನ್ನತನ ಅಂದ್ರ ಏನು?
ನನ್ನತನ, originality itself bullshit. What is the difference between our sacred India and non-sacred west? ಅಂತೇನಾದ್ರೂ ಕೇಳಿದ್ರ, it is the difference between bullshit and cowdung ಅಂತೇನಿ, ಬರ್ಕೋರಿ ಇದನ್ನ. ನಿಮ್ಮದು ಕನ್ನಡನೋ ಇಂಗ್ಲಿಷ್ ಸಾಹಿತ್ಯಾನೋ? ಓಹ್ ಕನ್ನಡಾನಾ… ಭಾಳ ಚುಲೋ ಆತು, that's what you are healthy. Originality ಅನ್ನೋ ಶಬ್ದ ನನಗ ತಿಳಿದ ಮಟ್ಟಿಗೆ ಮುನ್ನೂರೈವತ್ತು ವರ್ಷಕ್ಕಿಂತ ಹೆಚ್ಚಿನದಲ್ಲ. ಇದು ಶೇಕ್ಸ್ಪಿಯರ್ಗೂ ಗೊತ್ತಿರಲಿಲ್ಲ, ನಮ್ಮ ಕಾಳಿದಾಸಪ್ಪಗೂ ಗೊತ್ತಿರಲಿಲ್ಲ. ಪಂಪ ರನ್ನ ಪಂಪ್ ಹೊಡದ್ಹೊಡದ ಇಟ್ಟರು. ‘ನನ್ನತನ’ ಅನ್ನೋದನ್ನ ಹಾ! ಅಂತ ಕೇಳ್ತಾರ ಈವತ್ತ ಮಂದಿ, ಸುಳ್ಳದು ಎಲ್ಲಾ ಸುಳ್ಳ.
ಇನ್ನ… ನಾನು ಅನ್ನೋದು ನನಗೇನು ಗೊತ್ತು? ನಾ ನಡಕೋತ ಬಾತ್ರೂಮಿಗೆ ಹೋಗ್ತೇನಿ. ನೀರ್ ಹಾಕಿ ಕುಂಡರ್ತೇನಿ, ತೊಳ್ಕೊಂಬರ್ತೇನಿ. ಇದಷ್ಟ ರಿಯಲ್. ಆದ್ರೂ ಇದು ಒರಿಜಿನಲ್ ಅಲ್ಲ, ಇದೆಲ್ಲ ನಮ್ಮಪ್ಪ ನಮ್ಮವ್ವ ಹೇಳಿಕೊಟ್ಟಿದ್ದು.
ನಾವು ಮಾಡೂದೆಲ್ಲಾ ಅನುಕರಣೆ ಏನು ಮತ್ತ?
ನೋಡ್ರಿ ನಾವು ಹಿಂಗ ಡಿಫೈನ್ ಮಾಡೂದ್ರಾಗ ಹೋಗಿಬಿಡ್ತೇವಿ. ನಾವು ಯಾವುದೋ ಕಾಂಟೆಕ್ಸ್ಟ್ನಲ್ಲಿ ಹುಟ್ಟಿರ್ತೀವಿ. ಬೆಳಸ್ತಾರ ಬೆಳೀತೀವಿ. ನಮ್ ತಾಯಿ ಕೊಟ್ಟಿದ್ದ ಉಣ್ತೇವಿ. ಸಂಸ್ಕಾರ ಅನ್ನೋ ಸಂಸ್ಕೃತ ಶಬ್ದ ಬಹಳ ದೊಡ್ಡ ಶಬ್ದ. ವಿಚಾರ ಮಾಡಿದಷ್ಟೂ ಹರಡ್ತದ ಅದು. ನಮ್ಮ ಸುತ್ತಮುತ್ತ ಇರೋದರ ಬಗ್ಗೆ ನಮಗಾಗೋ ಅನುಭವಗಳ ಮುದ್ದಿ ಅದು. ಅದರ ಪ್ರಭಾವ ನಮ್ಮ ಮ್ಯಾಲೆ ಆಗ್ತದ. ಈಗ ನೋಡ್ರಿ, ಅಲ್ಲಿ ಬೆಂಕಿ ಅದ, ಅದನ್ನ ಕೂಸು ಮುಟ್ಟಲಿಕ್ ಹೋಗ್ತಾನ ಹಾ! ಅಂತ ಕೈ ಹಿಂದ ತಕ್ಕೊಳ್ತದಿಲ್ಲೋ? ಅದು ಎಚ್ಚರಿಕೆ ಅಂತಷ್ಟ ಅಲ್ಲ, ಸುಖಾನೂ ಹೌದು. ಅದ ಕೂಸಿನ ಮುಂದ ಐಸ್ಕ್ರೀಮ್ ಹಿಡದ್ರ, ಹಾ… ಅಂತ ಬಾಯಿ ತಗದ ಆಶಾಕ್ ಬೀಳ್ತದ.
ತಂತೀ ಮೇಲೆ ಬೆರಳ ಇಟ್ರ ದುಃಖ ಉಮ್ಮಳಿಸಿ ಬರಬೇಕು.
ಈ ಶಾಸ್ತ್ರೀಯ ಸಂಗೀತ ಮತ್ತು ಅದರ ಅಮೂರ್ತತೆ ಇದೆಲ್ಲಾ ನಂಗೊತ್ತಿಲ್ಲವಾ. ಬೇಕಾರ್ ಅದು. ಎಲ್ಲೀತನಕ ಒಂದ್ ಸಾಲಿಡ್ ಎಕ್ಸ್ಪೀರಿಯನ್ಸ್ ಸಿಗ್ತದ… (ಮಾತು ತುಂಡರಿಸಿ) ಸೆಕ್ಸ್! ಈಗ ನೀನಽ ಹೇಳು, Did you have sex? ಆ ಅನುಭವದ ಬಗ್ಗೆ ಸ್ವಲ್ಪ ಬರೆದುಕೊಡಕ್ಕಾಗತ್ತೇನು? ಇಲ್ಲ, ಸಂಗೀತನೂ ಅಷ್ಟ. ಅಷ್ಟಕ್ಕೂ ಈವತ್ತಿನ ದಿನದೊಳಗ ಎಲ್ಲ್ಯದ ಗಂಭೀರ ಗೆಳೆತನ? ಸಿಕ್ಕಾಗ, ಮತ್ ಹ್ಯಾಂಗ್ರಿ ನಮ್ಮನ್ನ ಮರೆತ್ಬಿಟ್ರಿ ಏನು? ಅಂತ ಬಾಲಿಶ ಮಾತಾಡಿಬಿಡ್ತೀವಿ. ಆದ್ರ ಅದು ಹಂಗಲ್ಲ, ಈಗ ಹಾರ್ಮೋನಿಯಂ ತುಗೋರಿ. ಬೆರಳಿಡೂದಲ್ಲ, ಅದರ ಮ್ಯಾಲೆ ಕುಂತ್ರೂ ಸ್ವರ ನುಡೀತದ. ಆದ್ರ ಸರೋದ್ ಹಂಗಲ್ಲ. ಯಾವ ಸ್ವರದ ಮೇಲೆ ಹೆಂಗ್ ಕೈ ಇಡಬೇಕೋ ಹಂಗ ಇಟ್ಟು ನುಡಿಸಿದ್ರ, ದುಃಖ ಉಮ್ಮಳಿಸಿ ಬರ್ತದ.
ನಮ್ಮೊಳಗೆ ನಾವಿರೋದಕ್ಕ ಯಾಕ ಹೆದರ್ತೇವಿ?
ಕಲಾವಿದರಿಗೆ ತೃಪ್ತಿ ಇತ್ತೂ ಇರ್ತಾರ, ಅದೆಂದ ಹೋಗಿಬಿಡ್ತದೋ ಅವರು ಅಲ್ಲಿ ಇರೂದಿಲ್ಲ. ದೇವರಿಗಾಗಿ, ಗುರುಗಳಿಗಾಗಿ, ತಂದೆ-ತಾಯಿಗಾಗಿ ಯಾರೂ ಕಲಾವಿದರಾಗೂದಿಲ್ಲ. ನನಗ ಸೌಖ್ಯ ಸಿಗ್ತದ ನಾ ನುಡಸ್ತೀನಿ. ಇನ್ನೊಬ್ರು ಬರೀತಾರ? ಅವರಿಗೆ ಅಲ್ಲಿ ಸೌಖ್ಯ ಸಿಕ್ಕದ. ಗುಂಡ್ ಹಾಕ್ತಾರಾ ಅದ ಅವ್ರಿಗೆ ಸೌಖ್ಯ. ಹಿಂಗ ನಾವು ಸೌಖ್ಯವನ್ನ ಅಡಗಿಯೊಳಗ, ಓದೂದ್ರೊಳಗ, ಮದುವಿಯೊಳಗ, ಲೈಂಗಿಕತೆಯೊಳಗ ಹುಡುಕ್ತಾನ ಇರ್ತೀವಿ. ಒಂದು ನಿಮಿಷದ ಸೌಖ್ಯಕ್ಕ ಮದುವಿಯಾಗಿ, ಇಡೀ ಜೀವನ ಕೊಡೋದು ಅಂದ್ರ!?
ಸುಖ ಬೇಕಂದ್ರ ನಮಗ ಬೇಕಾದ ಕೆಲಸದೊಳಗ ತೊಡಗಿಕೊಳ್ಳಬೇಕು. ಮಾಡೋದಿಕ್ಕೆ ನಮಗೆ ಹಝಾರ್ ಕೆಲಸಗಳವ. ಆದ್ರ ನಾವು ಕಷ್ಟಪಟ್ಟು ಅದರೊಳಗ ತೊಡಗಿಕೊಳ್ಳೂದಿಲ್ಲ. ಬರೀ ನೆಗೆಟಿವ್ ವಿಚಾರಗಳು. ನಮ್ಮ ಪ್ರೊಫೆಸರ್ ಒಬ್ಬರು ಎರಡು ನಾಯಿ ಸಾಕಿದ್ರು. ಒಂದು ಪೊಯೆಟ್ರಿ ಇನ್ನೊಂದು ಕ್ರಿಟಿಸಿಸಂ; ಗಂಭೀರ ವಿಚಾರದ ನಡಕ್ಕ ನಾಯಿ ತಂದು ಬಿಟ್ಟುಬಿಡ್ತೇವಿ, interruption, diversion; ಗ್ರೇಟ್, ಸಾಧಾರಣೀಕರಣ, ಇದು ನಮ್ಮ ಕೆಟ್ಟತನ. ಅಂದಹಂಗ ನಮ್ಮ ನಾಯಿ ಹೆಸರು ಏನ್ ಗೊತ್ತೇನು? ತಿಮ್ಮ!
ನಮಗ ಗಂಭೀರ ವಿಚಾರ, ವಿಷಯಗಳ ಒಳಗ ಆಸಕ್ತಿ ಇಲ್ಲ. ಹಿಂಗಿಲ್ಲದಾಗ ನಾವು ನಮ್ಮೊಳಗ ಇರಲಿಕ್ಕೆ ಹೆದರ್ತೇವಿ. ನಮಗ ಬೇಸಿಕ್ ಪಾಸಿಟಿವ್ ವಿಚಾರಗಳ ಬಗ್ಗೆ ಭಯ ಅದ. ಯಾಕಂದ್ರ ಸಂಗೀತದಂಥ ಕಲೆಯೊಳಗ ನಾನು nonexistent ಇರಬೇಕು ಇಲ್ಲಾ honest ಆಗಿರಬೇಕು.
ಮತ್ತ ಈ ಕಾರ್ಯಕ್ರಮದೊಳಗಿನ ಹಾರ ಅನ್ನೋದು ಈವತ್ತು ಹಗ್ಗ ಇದ್ದಹಂಗ. Unusual, outstanding ಇರೋ ಕಲಾವಿದರು ಕಲಾವಿದರೇ ಅಲ್ಲ. ನಾವು extraordinary ಕಲಾವಿದರನ್ನ ಸಹಿಸಿಕೊಳ್ಳೂದ ಇಲ್ಲ. ಅವರ ಬಗ್ಗೆ ಭಯ ಅದ ನಮಗ. ಅವರ ಜೋಡಿ ಜಾಸ್ತಿ ಟೈಮ್ ಕಳೀಲಿಕ್ಕಾಗಲಿ, ಮಾತನಾಡ್ಲಿಕ್ಕಾಗ್ಲಿ ಭಯ ಪಡ್ತೀವಿ. ಅದಕ್ಕ ನಾವು ಅಲ್ಲಿಂದ ಲಗೂನ ಎದ್ದ ಹೊಂಟಬಿಡ್ತೀವಿ.
ಕೆಸರು; ಯಾವುದಾದರೂ ಘಟನಾ ನೆನಪಾಗಬಹುದ?
ಒಬ್ಬಾಂವ ಇದ್ದ. ಕವನ ಬರ್ದು, ಇದು ಆಳವಾದ ಅಧ್ಯಯನದ ಫಲ ಅಂತ ಹೇಳ್ತಿದ್ದ. ಸೂಳೆಮಗ, ಉಪ್ಪಿನಕಾಯಿಯೊಳಗ ಉಪ್ ಹೆಚ್ಚಾತಂದ್ರ, ಹೆಂಡತೀನ್ ಹಿಡ್ಕೊಂಡ್ ಹೊಡೀತಿದ್ದ. ಇನ್ನೊಬ್ಬಾಂವ ಇದ್ದ. ಮಳೆಘಟ್ಟ ಸೋಪಾನ ಕಡಘಟ್ಟ ಕಡಘಟ್ಟ ಅಂತ ಬರೀತಿದ್ದ. ಇನ್ನೊಬ್ಬ ಕವಿ ಇದ್ದ, ಒಂದಿನ ಬರ್ರಿ ಬರ್ರಿ ಅಂತ ಮನೀಗೆ ಕರದ. ಹೋದ್ರ ಮೈಮೇಲೆ ನನಗ ದಾರ ಇಲ್ಲ. ಸುಮತೀಂದ್ರ ನಾಡಿಗ್, ಅನಂತಮೂರ್ತಿ, ಶ್ರೀನಿವಾಸ್ ರಾವ್ ಅವರೆಲ್ಲ ಒಳಗ ಹೋದ್ರು. ಅವ ಓದಿದ ಕವನಾನ ನಾನು ಭಾಳಾ ಗಂಭೀರವಾಗಿ ತಗೊಂಡಿದ್ದೆ. ಆದ್ರ ಆಮ್ಯಾಲ ಗೊತ್ತಾತು, ಅವ ಎಲಿಯಟ್ ಕವನ ಕಾಪಿ ಹೊಡೆದಿದ್ದ ಅಂತ.
ಆಮ್ಯಾಲೆ ಈ ಸಂಗೀತ ಮತ್ತ ಸಾಹಿತಿಗಳ ವಿಚಾರಕ್ಕ ಬಂದ್ರ, ಸಂಗೀತ ಕೇಳಿ ನಮ್ಮ ಸಾಹಿತಿಗಳು ಹೇಳ್ತಾರ, ನಿನ್ನ ಸಂಗೀತ ಕೇಳಿದೆ, ಆದ್ರ ಯಾಕೋ ಅದು ನನ್ನ ಅಷ್ಟ್ ಮೂವ್ ಮಾಡಲಿಲ್ಲ. ಕಳ್ಳಸೂಳೇಮಕ್ಕಳಾ ಸಂಗೀತ ಅಂದ್ರ ಏನ್ ಗೊತ್ತದ? ಒಬ್ಬ ಕಲಾವಿದ ಅದರ ಜೋಡಿ ಎಷ್ಟ್ ದುಡದಿರ್ತಾನ ಅಂತ? ಒದ್ದರ ಅವ ಅಳೂದಿಲ್ಲ, ಒದರೂದಿಲ್ಲ. ಆ ನೋವನ್ನ ಹಾಡಿನೊಳಗ ತರಲಿಕ್ಕೆ ನೋಡ್ತಾನ. ಬಾರಸೂದ್ರಾಗ involvement ತಗೋತಾನ. ಒದ್ದರೋ ಅಂತ ಅಯ್ಯೋ ಅಯ್ಯೋ ಅಂತ ಒದರೂದು … Rubbish!
ಅಪರೂಪದ ವ್ಯಕ್ತಿತ್ವ. ಎಪ್ಪತ್ತರ ದಶಕದಲ್ಲಿ ಅವರ ಲೇಖನಗಳನ್ನು (ವಿಮರ್ಶೆ) ಓದಿದ ನೆನಪು. ನಂತರ ಎಂಭತ್ತರ ದಶಕದಲ್ಲಿ ಆಕಸ್ಮಿಕವಾಗಿ ಸಿರ್ಸಿಯಲ್ಲಿ ಅವರ ಸರೋದ್ ವಾದನ ಸವಿಯುವ ಅವಕಾಶ ಸಿಕ್ಕಿತು. ಅವರಿಗೆ ಚಿರಶಾಂತಿ ಲಭಿಸಲಿ.
-- ಪರಮೇಶ್ವರ ಎಂ ಎಸ್